ಚಿಕ್ಕಮಗಳೂರು: ಚಲಿಸುತ್ತಿದ್ದಾಗಲೇ ಬಸ್ ನ ಚಕ್ರ ಕಳಚಿಬಿದ್ದ ಘಟನೆ ನಡೆದಿದೆ.
ಮಳೆಯಲ್ಲಿ (Rain) ಸಂಚರಿಸುತ್ತಿದ್ದಾಗಲೇ ಬಸ್ಸಿನ ಚಕ್ರ ಕಳಚಿ ಬಿದ್ದಿರುವ ಈ ಘಟನೆ ಎನ್.ಆರ್.ಪುರ (NR Pura) ತಾಲೂಕಿನ ಬಾಳೆಹೊನ್ನೂರಿನ (Balehonnur) ರೋಟರಿ ಸರ್ಕಲ್ ಹತ್ತಿರ ನಡೆದಿದೆ.
ಮಂಗಳವಾರ ರಾತ್ರಿ ವೇಳೆ ಖಾಸಗಿ ಬಸ್ಸು ಬೆಂಗಳೂರಿನಿಂದ ಹೊರಟು ಶೃಂಗೇರಿಗೆ ತೆರಳುತ್ತಿತ್ತು. ಬೆಳಗ್ಗೆ 5:18 ರ ವೇಳೆಗೆ ರೋಟರಿ ಸರ್ಕಲ್ನಲ್ಲಿ ಬಸ್ಸು ಸಂಚರಿಸುತ್ತಿದ್ದಾಗ ಹಿಂಬದಿಯ ಎರಡೂ ಚಕ್ರ ಕಳಚಿ ಬಿದ್ದಿವೆ. ಚಕ್ರ ಕಳಚುವ ಸಮಯದಲ್ಲಿ ಮಳೆ ಬರುತ್ತಿತ್ತು ಮತ್ತು ಬಸ್ಸು ನಿಧಾನವಾಗಿ ಸಂಚರಿಸುತ್ತಿತ್ತು. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಒಂದು ವೇಳೆ ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ದೊಡ್ಡ ದುರಂತವೇ ನಡೆಯುವ ಸಾಧ್ಯತೆ ಇತ್ತು. ಯಾವುದೇ ಅಹಿತಕರ ಘಟನೆ ನಡೆಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂತಸ ಪಟ್ಟಿದ್ದಾರೆ. ಆದರೆ, ಇದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.