ವಿಜಯಪುರ: ನಕಲಿ ಮತದಾನ ಮಾಡಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ವಿರುದ್ದದ ಆರೋಪ ವಜಾಗೊಂಡಿದ್ದು, ದೂರುದಾರ ಅಬ್ದುಲ್ ಹಮೀದ್ ಮುಶ್ರೀಫ್ಗೆ ಹೈಕೋರ್ಟ್(High Court) 1 ಲಕ್ಷ ರೂ. ದಂಡ ವಿಧಿಸಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿರುವ ಆರೋಪದ ಮೇಲೆ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ವಿರುದ್ದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಬ್ದುಲ್ ಹಮೀದ್ ಮುಶ್ರೀಫ್ ದೂರು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ವಜಾ ಮಾಡಿ, ದೂರುದಾರ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಅಬ್ದುಲ್ ಹಮೀದ್ ಮುಶ್ರೀಫ್ಗೆ 1 ಲಕ್ಷ ರೂ. ದಂಡ ಕಟ್ಟುವಂತೆ ನ್ಯಾಯಾಧೀಶೆ ಹೇಮಲೇಖಾ ಆದೇಶಿಸಿದ್ದಾರೆ. ಈ ಕುರಿತು ಶಾಸಕ ಯತ್ನಾಳ್ ಟ್ವಿಟ್ಟರ್, ಪೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ವಿರುದ್ದ ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ದಾಖಲಿಸಿದ್ದ “ಚುನಾವಣಾ ಅರ್ಜಿಯನ್ನು” ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ ಹಾಗೂ ಅರ್ಜಿದಾರರಿಗೆ 1ಲಕ್ಷ ದಂಡ ಹಾಕಿದೆ. ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ.
