ನವದೆಹಲಿ: ಡೆಲ್ಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದಲ್ಲಿದ್ದಾರೆ. ಇದರ ಬೆನ್ನಲ್ಲಿಯೇ ಸಚಿವ ಕೈಲಾಶ್ ಗೆಹ್ಲೋಟ್ ಗೆ ಇಡಿ ಸಮನ್ಸ್ ನೀಡಿದೆ.
ಎಎಪಿ ನಾಯಕ ಗೆಹ್ಲೋಟ್ ದೆಹಲಿ ಸರ್ಕಾರದಲ್ಲಿ ಗೃಹ, ಸಾರಿಗೆ ಮತ್ತು ಕಾನೂನು ಸಚಿವರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ತಿಳಿಸಿದೆ. ಇ.ಡಿ ಸಮನ್ಸ್ ಬರುತ್ತಿದ್ದಂತೆ ಗೆಹ್ಲೋಟ್ ಈಗಾಗಲೇ ತನಿಖಾ ಸಂಸ್ಥೆಯ ಕಚೇರಿಯನ್ನು ತಲುಪಿದ್ದಾರೆ. ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಸಮನ್ಸ್ ಜಾರಿಯಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಕೈಲಾಶ್ ಗಹ್ಲೋಟ್ ಅವರನ್ನು ಕೇಳಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ.
ಮದ್ಯ ನೀತಿ ಹಗರಣದಲ್ಲಿ 600 ಕೋಟಿ ರೂ. ಅಧಿಕ ಹಣ ಲಂಚವಾಗಿ ಪಡೆಯಲಾಗಿದೆ. ಆ ಹಣವನ್ನು ಗೋವಾ ಮತ್ತು ಪಂಜಾಬ್ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇ.ಡಿ ಆರೋಪಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮೂವರು ಪ್ರಮುಖರನ್ನು ಬಂಧಿಸಲಾಗಿದೆ. ಎಎಪಿ ಸಂಸದ ಸಂಜಯ್ ಸಿಂಗ್, ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನಕ್ಕೆ ಒಳಗಾಗಿದ್ದಾರೆ.