ಬೆಂಗಳೂರು : ಕುಡಿದು ಗಲಾಟೆ ಮಾಡುತ್ತಿದ್ದ ತಂದೆಯನ್ನು ಮಗ ಹಾಗೂ ಅಳಿಯ ಸೇರಿ ಕೊಲೆ ಮಾಡಿರುವ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ಸೈಯದ್ ಶಾರುಕ್ ಹಾಗೂ ಅಳಿಯ ಶಹ್ನಿಶಾ ಅವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಜುಲೈ 4ರಂದು 48 ವರ್ಷದ ರಫೀಕ್ ಅವರನ್ನು ಕೊಲೆ ಮಾಡಿ ಬೇಗೂರಿನ ವಿಟ್ಲಸಂದ್ರ ಗ್ರಾಮದ ನೀಲಿಗಿರಿ ತೋಪಿನಲ್ಲಿ ಶವ ಎಸೆದಿದ್ದರು. ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಆರಂಭಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ತಮಿಳುನಾಡು ಮೂಲದ ಸೈಯದ್ ಶಾರುಕ್ ಹಾಗೂ ಶಹ್ನಿಶಾ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಶಹ್ನಿಶಾ ಶಾಲಾ ಬಸ್ ಚಾಲಕನಾಗಿದ್ದು, ಸಂಜೆ ವೇಳೆಯಲ್ಲಿ ಆಟೋ ಚಾಲನೆ ಮಾಡುತ್ತಿದ್ದರೆ, ಶಾರುಕ್ ಬೈಕ್ ಟ್ಯಾಕ್ಸಿ ಚಾಲಕನಾಗಿದ್ದ. ಇನ್ನು, ಕುಡಿತದ ಚಟಕ್ಕೆ ಬಿದ್ದಿದ್ದ ರಫೀಕ್ ಆಗಾಗ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದನು. ಜುಲೈ 4ರಂದು ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡಿದ್ದ ವೇಳೆ ಜಗಳ ತಾರಕಕ್ಕೇರಿದ್ದು, ಸೈಯದ್ ಶಾರುಕ್ ಹಾಗೂ ಶಹ್ನಿಶಾ, ರಫೀಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಶಹ್ನಿಶಾ ಅವರ ಆಟೋದಲ್ಲಿ ರಫೀಕ್ ಅವರನ್ನು ಕೂರಿಸಿಕೊಂಡು ಬೇಗೂರು ಕಡೆಗೆ ಕರೆದೊಯ್ದು, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಸಿಂಗಸಂದ್ರ ಕೆರೆ ಸಮೀಪದ ನೀಲಿಗಿರಿ ತೋಪಿನಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ : ಕಸ ವಿಲೇವಾರಿ ನಿಯಮ ಉಲ್ಲಂಘನೆ : 5 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್!



















