ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದ ಕೆಸವೆ ಪ್ರದೇಶದಲ್ಲಿರುವ ಬ್ರಿಟಿಷರ ಕಾಲದ ಪ್ರವಾಸಿ ಮಂದಿರದ ಬಳಿ ಒಂಟಿ ಸಲಗ ಕಾಣಿಸಿಕೊಂಡ ಘಟನೆ ಗಮನಸೆಳೆದಿದೆ.
ಅಭಯಾರಣ್ಯದ ಮಧ್ಯಭಾಗದಲ್ಲಿರುವ ಈ ಐಬಿ (ಪ್ರವಾಸಿ ಮಂದಿರ) ಬಳಿ ಕಾಡಾನೆ ಏಕಾಏಕಿ ಪ್ರವೇಶಿಸಿದೆ. ಕಾಡಾನೆಗಳು ಹಾಗೂ ಇತರೆ ವನ್ಯ ಮೃಗಗಳು ಒಳನುಗ್ಗದಂತೆ ಅರಣ್ಯ ಇಲಾಖೆ ಸುತ್ತಮುತ್ತ ಟ್ರಂಚ್ ನಿರ್ಮಿಸಿದ್ದರೂ, ವಾಹನ ಸಂಚಾರಕ್ಕೆ ಮಾಡಿರುವ ರಸ್ತೆಯ ಮೂಲಕ ಕಾಡಾನೆ ಪ್ರವೇಶಿಸಿದುದಾಗಿ ತಿಳಿದುಬಂದಿದೆ.
ಕೆಲಕಾಲ ಪ್ರವಾಸಿ ಮಂದಿರದ ಮುಂಭಾಗ ನಿಂತಿದ್ದ ಸಲಗ, ನಂತರ ಯಾವುದೇ ಅನಾಹುತ ಉಂಟುಮಾಡದೆ ಅರಣ್ಯ ಪ್ರದೇಶದತ್ತ ತೆರಳಿದೆ. ಈ ಪ್ರವಾಸಿ ಮಂದಿರವು ಸಫಾರಿ ತೆರಳುವವರಿಗೆ ಪ್ರಮುಖ ಆಕರ್ಷಣೆಯಾಗಿದ್ದು, ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಬ್ರಿಟೀಷರು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಟ್ಟಡವಾಗಿದೆ. ಈ ಘಟನೆ ಪ್ರವಾಸಿಗರು ಹಾಗೂ ಅರಣ್ಯ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾದರೂ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ



















