ಚಿತ್ರದುರ್ಗ: ಉಪನ್ಯಾಸಕರ ಜೊತೆ ಅನೈತಿಕ ಸಂಬಂಧವಿದೆ ಎಂಬ ಆರೋಪದಿಂದ ಅವಮಾನಕ್ಕೊಳಗಾಗಿ BMS ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಲಿಖಿತ (22) ಎಂಬ ವಿದ್ಯಾರ್ಥಿನಿ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂಟರ್ನ್ಶಿಪ್ ನಡೆಸುತ್ತಿದ್ದರು. ಉಪನ್ಯಾಸಕ ಡಾ. ರಾಜು ಅವರೊಂದಿಗೆ ಅನೈತಿಕ ಸಂಬಂಧವಿದೆ ಎಂಬಂತೆ ಸಹಪಾಠಿಗಳಿಂದ ಅಪಪ್ರಚಾರ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ.
ಇದರ ಮಧ್ಯೆ, ಉಪನ್ಯಾಸಕನ ಪತ್ನಿ ನಿಶಾ ಕಾಲೇಜಿಗೆ ಬಂದು ವಿದ್ಯಾರ್ಥಿನಿಯೊಂದಿಗೆ ಗಲಾಟೆ ನಡೆಸಿದ್ದರಿಂದ ಅವಮಾನಕ್ಕೆ ಒಳಗಾದ ಲಿಖಿತ ಮಾನಸಿಕವಾಗಿ ಕುಗ್ಗಿ ಈ ದುರ್ಘಟನೆಗೆ ಕೈ ಹಾಕಿರುವುದಾಗಿ ಹೇಳಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಜೀವ ತ್ಯಾಗ ಮಾಡಿದ್ದಾಳೆ. ತನ್ನ ಸಾವಿಗೆ ಅನುಷಾ, ರಕ್ಷಾ, ಚಿನ್ಮಯಿ ಹಾಗೂ ನಿಶಾರಾಜ್ ಕಾರಣ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿದಿದೆ.



















