ಬೆಂಗಳೂರು : ಕರ್ನಾಟಕ ಸೇರಿ ದೇಶಾದ್ಯಂತ ಬೇಸಿಗೆ ಆರಂಭವಾಗಿದೆ. ದಿನೇದಿನೆ ಸೂರ್ಯನ ಪ್ರಖರತೆ ಜಾಸ್ತಿಯಾಗುತ್ತಲೇ ಇದೆ. ಬೆಳಗ್ಗೆ 11 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಲೂ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನ್ಯಾಯ ಬೆಲೆ ಅಂಗಡಿಗೆ ತೆರಳಿ ರೇಷನ್ ತರುವುದು ಕಷ್ಟವಾಗುತ್ತಿದೆ. ಇದನ್ನು ಮನಗಂಡೇ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 1 ರಂದು ನೀವು ಒಮ್ಮೆಯೇ 3 ತಿಂಗಳ ರೇಷನ್ ಪಡೆಯಬಹುದು. ಈ ಕುರಿತು ಕೇಂದ್ರ ಸರ್ಕಾರವೇ ಆದೇಶ ಹೊರಡಿಸಿದೆ.
ಹೌದು, ಏಪ್ರಿಲ್ ತಿಂಗಳಲ್ಲಿಯೇ ನೀವು ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ರೇಷನ್ ಅನ್ನು ಪಡೆಯಬಹುದಾಗಿದೆ. ಬೇಸಿಗೆ ಬಿಸಿಲು ಜಾಸ್ತಿಯಾಗುತ್ತಿರುವ ಕಾರಣ ಮೂರು ತಿಂಗಳ ಪಡಿತರವನ್ನು ಒಮ್ಮೆಯೇ ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನ್ವಯ ರೇಷನ್ ನೀಡಲಾಗುತ್ತದೆ. ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಇರುವವರಿಗೆ ಈ ಸೌಲಭ್ಯ ಸಿಗಲಿದೆ.
ಮೂರು ತಿಂಗಳ ಪಡಿತರವನ್ನು ಒಟ್ಟಿಗೆ ಪಡೆಯುವಾಗಲೂ ನೀವು ಒಮ್ಮೆ ಬಯೋಮೆಟ್ರಿಕ್ ನೀಡಿದರೆ ಸಾಕು. ಬೇಸಿಗೆಯ ಸಮಯದಲ್ಲಿ ಜನರಿಗೆ ಪದೇ ಪದೇ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಬರಗಾಲದಂತಹ ಸಂದರ್ಭಗಳಲ್ಲಿ ಆಹಾರ ಭದ್ರತೆ ಒದಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ನಿಮ್ಮ ಕಾರ್ಡ್ ತೋರಿಸಿ ಮೂರು ತಿಂಗಳ ಪಡಿತರವನ್ನು ಒಟ್ಟಿಗೆ ನೀಡುವಂತೆ ಕೇಳಬಹುದು. ಅಂಗಡಿಗಳಲ್ಲಿ ಪಡಿತರ ದಾಸ್ತಾನು ಲಭ್ಯತೆ ಆಧರಿಸಿ ವಿತರಣೆ ಮಾಡಲಾಗುತ್ತದೆ. ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿರಲು ಇ-ಕೆವೈಸಿ ಪೂರ್ಣಗೊಂಡಿರುವುದು ಕಡ್ಡಾಯ. ಒಂದು ವೇಳೆ ಬಾಕಿ ಇದ್ದರೆ ಕೂಡಲೇ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಿಕೊಳ್ಳಿ.
ಇದನ್ನೂ ಓದಿ : ಸರ್ಕಾರದ ವಿರುದ್ಧ ಮತ್ತೊಮ್ಮೆ ಸಿಡಿದೆದ್ದ ವಿದ್ಯಾರ್ಥಿಗಳು – ಮಾ.27ಕ್ಕೆ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ!


















