ಬೆಂಗಳೂರು: ರಾಜ್ಯ ಸರ್ಕಾರವು 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ, ವರ್ಗಾವಣೆಗೆ ಸಂಬಂಧಿಸಿದ ಆದೇಶ ಪಡೆದರೂ ಶಿಕ್ಷಕರು ಹೊಸ ಶಾಲೆಗೆ ರಿಪೋರ್ಟ್ ಮಾಡಿಕೊಳ್ಳುವ ದಿನಾಂಕ ಪ್ರಕಟವಾಗಿರಲಿಲ್ಲ. ಇದರಿಂದಾಗಿ ಶಿಕ್ಷಕರು ತುಸು ಗೊಂದಲದಲ್ಲಿದ್ದರು. ಈಗ ಕೊನೆಗೂ ರಾಜ್ಯ ಸರ್ಕಾರವು ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ.
ಹೌದು, ಈಗಾಗಲೇ ವರ್ಗಾವಣೆಗೊಂಡಿರುವ ಶಿಕ್ಷಕರು ಹೊಸ ಶಾಲೆಗಳಿಗೆ ಏಪ್ರಿಲ್ 10ರಂದು ಹಾಜರಾಗಬೇಕು. ಅವತ್ತು ರಿಪೋರ್ಟ್ ಮಾಡಿಕೊಳ್ಳುವ ಮೂಲಕ ಹೊಸ ಶಾಲೆ ಸೇರ್ಪಡೆಯಾಗಬೇಕು ಎಂದು ಆದೇಶಿಸಲಾಗಿದೆ. ಹಾಗೆಯೇ, ಇದುವರೆಗೆ ಕಾರ್ಯನಿರ್ವಹಿಸಿದ ಶಾಲೆಯಿಂದ ಏಪ್ರಿಲ್ 9ರಂದು ರಿಲೀವ್ ಮಾಡಿಕೊಂಡು, ಅದರ ಮರುದಿನವೇ ಹೊಸ ಶಾಲೆಗೆ ಸೇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಶಿರಾಳ್ಕರ್ ಅವರು ಹೊಸ ಆದೇಶ ಹೊರಡಿಸಿದ್ದಾರೆ. ಹಾಗೊಂದು ವೇಳೆ ವರ್ಗಾವಣೆಗೊಂಡ ಶಿಕ್ಷಕರು ಈಗಾಗಲೇ ಬೇರೆ ಕೆಲಸಗಳಿಗೆ ನಿಯೋಜನೆಗೊಂಡಿದ್ದರೆ, ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ಇದು ವರ್ಗಾವಣೆಗೊಂಡಿರುವ ಶಿಕ್ಷಕರಿಗೆ ಗುಡ್ ನ್ಯೂಸ್ ಎನಿಸಿದೆ.
ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಹಾಗೂ ವರ್ಗಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ಮುಕ್ತಾಯಗೊಳಿಸುವ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ ಎಂದು ಆಯುಕ್ತ ವಿಕಾಸ್ ಕಿಶೋರ್ ಸುರಾಳ್ಕರ್ ಮಾಹಿತಿ ನೀಡಿದ್ದಾರೆ. ಜನಗಣತಿ ಸೇರಿ ಯಾವುದೇ ಹೆಚ್ಚಿನ ಕೆಲಸಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಬಳಸಿಕೊಳ್ಳಬಾರದು ಎಂದು ಕೂಡ ತಿಳಿಸಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ಆರೋಗ್ಯ ಉತ್ತೇಜನಾ ಟ್ರಸ್ಟ್ ನಲ್ಲಿ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ



















