ಬೆಂಗಳೂರು: ಅಮೇರಿಕಾ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ದೇಶದ ಹಲವು ಭಾಗಗಳಲ್ಲಿ ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಇದರ ಪರಿಣಾಮ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೂ ಸ್ಪಷ್ಟವಾಗಿ ಕಾಣುತ್ತಿದೆ. ಗ್ಯಾಸ್ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆ ಕೆಲವು ಹೋಟೆಲ್ ಮಾಲೀಕರು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಖರೀದಿಸಲು ಮುಂದಾಗಿರುವುದು ತಿಳಿದುಬಂದಿದೆ.
ಸಾಮಾನ್ಯವಾಗಿ ದೊರೆಯುವ ದರಕ್ಕಿಂತ ಒಂದು ರಿಂದ ಎರಡು ಪಟ್ಟು ಹೆಚ್ಚುವರಿ ಬೆಲೆ ನೀಡಿ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಹೋಟೆಲ್ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದ ಕಾರಣ, ಹೆಚ್ಚುವರಿ ಹಣ ನೀಡಿ ಗ್ಯಾಸ್ ಖರೀದಿಸಿ ವ್ಯವಹಾರ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹೆಚ್ಚುವರಿ ವೆಚ್ಚದ ಪರಿಣಾಮವಾಗಿ ಇದೀಗ ಗ್ರಾಹಕರಿಗೂ ಬಿಗ್ ಶಾಕ್ ಎದುರಾಗಿದೆ. ಗ್ಯಾಸ್ ಕೊರತೆಯ ಹಿನ್ನಲೆಯಲ್ಲಿ ಹಲವಾರು ಹೋಟೆಲ್ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಶಿವಾನಂದ ಸರ್ಕಲ್ ಪ್ರದೇಶದಲ್ಲಿರುವ ಬೆಂಗಳೂರು ಕೆಫೆ ಸೇರಿದಂತೆ ಕೆಲವು ಹೋಟೆಲ್ಗಳಲ್ಲಿ ತಿಂಡಿ ತಿನಿಸುಗಳ ದರ ಹೆಚ್ಚಿಸಲಾಗಿದೆ.
ಪ್ರತಿ ತಿಂಡಿ ಪದಾರ್ಥದ ಮೇಲೂ ಸುಮಾರು 10 ರೂಪಾಯಿ ಹೆಚ್ಚುವರಿ ದರ ವಿಧಿಸಲಾಗಿದೆ. ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಲು ಹೋಟೆಲ್ ಮಾಲೀಕರು ಹಳೆಯ ದರದ ಪಕ್ಕದಲ್ಲೇ ಹೊಸ ದರವನ್ನು ಪ್ರದರ್ಶಿಸಿದ್ದಾರೆ.
ಯುದ್ಧದ ಪರಿಣಾಮ ಸ್ಥಳೀಯ ವ್ಯವಹಾರಗಳ ಮೇಲೂ ಬೀಳುತ್ತಿರುವುದು ಇದೀಗ ಸ್ಪಷ್ಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ಸರಬರಾಜು ಸಾಮಾನ್ಯ ಸ್ಥಿತಿಗೆ ಬರದಿದ್ದರೆ ಇನ್ನಷ್ಟು ದರ ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದಿನ ದರ – ಇಂದಿನ ದರ (ರೂ.ಗಳಲ್ಲಿ)
- ಇಡ್ಲಿ – 30 -40
- ವಡೆ – 30 -40
- ರವಾ ಇಡ್ಲಿ 40-50
- ಖಾರಾ ಬಾತ್ 30-40
- ಕೇಸರಿ ಬಾತ್ 30-40
- ಪಲಾವ್ – 50 -60
- ಪೂರಿ ಸಾಗು – 60-70
- ಸೆಟ್ ದೋಸೆ 60-70
- ಮಸಾಲಾ ದೋಸೆ – 60-70
- ರೈಸ್ ಸಾಂಬಾರ್ – 70-80
- ಊಟ – 90 -100
- ರೋಟಿ 90-100
ಇದನ್ನೂ ಓದಿ : ಗ್ಯಾಸ್ ಬೆನ್ನಲ್ಲೇ ಬೆಂಗಳೂರಿಗರಿಗೆ ಕಾದಿದೆ ಮತ್ತೊಂದು ಶಾಕ್!


















