ಬೆಂಗಳೂರು : ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಇದೀಗ ಭಾರತದ ಅಡುಗೆ ಮನೆಗಳ ಮೇಲೂ ಬೀಳತೊಡಗಿದೆ. ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ ಉಂಟಾಗಿರುವ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ಸರಬರಾಜು ಕೂಡ ವ್ಯತ್ಯಯವಾಗುತ್ತಿರುವುದು ನಗರದಲ್ಲಿ ಆತಂಕ ಮೂಡಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಕೆಲವು ಹೋಟೆಲ್ಗಳು ಗ್ಯಾಸ್ ಕೊರತೆಯಿಂದ ತಾತ್ಕಾಲಿಕವಾಗಿ ಬಂದ್ ಆಗಿರುವುದಾಗಿ ತಿಳಿದುಬಂದಿದೆ. ಈ ನಡುವೆಯೇ ಇದೀಗ ಅಡುಗೆ ಎಣ್ಣೆ ಅಂಗಡಿಗಳಿಗೂ ಸರಬರಾಜು ಸಮಸ್ಯೆ ಎದುರಾಗುತ್ತಿರುವ ಸಾಧ್ಯತೆ ವ್ಯಕ್ತವಾಗಿದೆ.
ನಗರದ ಅಡುಗೆ ಎಣ್ಣೆ ಅಂಗಡಿ ಮಾಲೀಕರೊಬ್ಬರು ಮಾತನಾಡಿ, ಕಳೆದ ಒಂದು ವಾರದಿಂದ ಎಣ್ಣೆಯ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ 100 ರಿಂದ 200 ಬಾಕ್ಸ್ ಎಣ್ಣೆ ಬುಕ್ ಮಾಡಿದರೆ ಏಜೆಂಟರು ಕೇವಲ 20 ರಿಂದ 50 ಬಾಕ್ಸ್ ಮಾತ್ರ ಕಳುಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರಬರಾಜು ಕಡಿಮೆಯಾದ ಹಿನ್ನೆಲೆಯಲ್ಲಿ ಎಣ್ಣೆಯ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಬಾಕ್ಸ್ಗೆ ಸುಮಾರು 15 ರಿಂದ 20 ರೂಪಾಯಿ ಹೆಚ್ಚಾಗಿದೆ. ಸರಬರಾಜು ಸಮಸ್ಯೆ ಮುಂದುವರೆದರೆ ಅಡುಗೆ ಎಣ್ಣೆ ಅಂಗಡಿಗಳು ಕೂಡ ಬಂದ್ ಆಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ಯಾಸ್ ಕೊರತೆಯ ಜೊತೆಗೆ ಅಡುಗೆ ಎಣ್ಣೆ ಸರಬರಾಜಿನ ಸಮಸ್ಯೆಯೂ ಹೆಚ್ಚಾದರೆ ಹೋಟೆಲ್ ಉದ್ಯಮ ಹಾಗೂ ಸಾಮಾನ್ಯ ಜನರ ದಿನನಿತ್ಯದ ಅಡುಗೆ ಕಾರ್ಯಕ್ಕೂ ಮತ್ತಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಗ್ಯಾಸ್ ಟ್ರಬಲ್ | ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ



















