ಬೆಂಗಳೂರು : ನೆಲಮಂಗಲ ಸಮೀಪದ ಬೆಂಗಳೂರು ಉತ್ತರ ತಾಲ್ಲೂಕಿನ ತರಬನಹಳ್ಳಿಯಲ್ಲಿ ಬೈಕ್ ವಿಚಾರಕ್ಕೆ ಉಂಟಾದ ಗಲಾಟೆ ಭೀಕರ ತಿರುವು ಪಡೆದಿದ್ದು, ವ್ಯಕ್ತಿಯು ತನ್ನ ಪ್ರೇಯಸಿ ಸೇರಿದಂತೆ ಮೂವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಪಾಂಡುರಂಗ (29) ತನ್ನ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ (48) ಹಾಗೂ ತಾಯಿ ಮಂಜಮ್ಮ (42) ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ಪ್ರಕಾರ, ಸುಮಲತಾ ನಾಲ್ಕು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಯಶವಂತಪುರ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇನ್ಸ್ಟಾಗ್ರಾಂ ಮೂಲಕ ಪಾಂಡುರಂಗನ ಪರಿಚಯವಾಗಿದ್ದು, ನಂತರ ಇಬ್ಬರೂ ಮನೆ ಬಿಟ್ಟು ಮಹಾಲಕ್ಷ್ಮೀ ಲೇಔಟ್ನ ಬಾಡಿಗೆ ಮನೆಯಲ್ಲಿ ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಪಾಂಡುರಂಗ ಇನ್ನೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದರಿಂದ ಇಬ್ಬರ ನಡುವೆ ಕಲಹ ಉಂಟಾಗಿ, ಸುಮಾರು ಎರಡು ತಿಂಗಳ ಹಿಂದೆ ಸುಮಲತಾ ಪಾಂಡುರಂಗನಿಂದ ದೂರವಾಗಿ ತನ್ನ ತಾಯಿ ಮನೆಯಾದ ತರಬನಹಳ್ಳಿಗೆ ಬಂದಿದ್ದರು.
ಇತ್ತೀಚೆಗೆ ಪಾಂಡುರಂಗ ಸುಮಲತಾ ಮನೆಗೆ ಬಂದು ಬೈಕ್ ಕೊಡುವಂತೆ ಕೇಳಿದ್ದಾನೆ. ಆದರೆ ಅದು ತನ್ನ ಅಕ್ಕನ ಬೈಕ್ ಎಂದು ಸುಮಲತಾ ನೀಡಲು ನಿರಾಕರಿಸಿದ್ದರಿಂದ ಗಲಾಟೆ ನಡೆದಿದೆ. ಈ ವೇಳೆ ಸುಮಲತಾ ಹಾಗೂ ಅವರ ಪೋಷಕರು ಪಾಂಡುರಂಗನನ್ನು ಬೈದು ಕಳಿಸಿದ್ದರೆಂದು ಹೇಳಲಾಗಿದೆ.
ಇದರಿಂದ ಸಿಟ್ಟಿಗೆದ್ದ ಪಾಂಡುರಂಗ ಪೆಟ್ರೋಲ್ ಎರಚಿ ಮೂವರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಗಾಯಗೊಂಡ ಮೂವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಆರೋಪಿ ಪಾಂಡುರಂಗನನ್ನು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಾಸ್ಟೆಲ್ ವಾರ್ಡನ್ ಸೇರಿ ಹಲವರ ಮೇಲೆ ವಿದ್ಯಾರ್ಥಿ ದಾಳಿ | ಓರ್ವ ಬಾಲಕ ಸಾವು, ಹಲವರಿಗೆ ಗಾಯ



















