ನವದೆಹಲಿ : ಇನ್ನು ಮುಂದೆ ದೇಶದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಆರಂಭವಾಗುವ ಮೊದಲು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಹಾಡುವುದು ಕಡ್ಡಾಯ. ಅಷ್ಟೇ ಅಲ್ಲ, ವಂದೇ ಮಾತರಂ ಗೀತೆ ಪ್ರಸಾರವಾಗುವಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುವುದು ಕೂಡ ಕಡ್ಡಾಯ.
ದೇಶದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಅಸ್ಮಿತೆಯ ಸಂಕೇತವಾಗಿರುವ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಬುಧವಾರ ಹೊರಡಿಸಿದ ಮಹತ್ವದ ಮಾರ್ಗಸೂಚಿ ಇದು.
ಆರು ಚರಣಗಳ ಪೂರ್ಣ ಗೀತೆಗೆ ಮರುಜೀವ
ಈ ಹೊಸ ನಿಯಮದ ಮತ್ತೊಂದು ಗಮನಾರ್ಹ ಅಂಶವೆಂದರೆ, ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆಯ ಎಲ್ಲಾ ಆರು ಚರಣಗಳನ್ನು ಇನ್ಮುಂದೆ ಹಾಡಬೇಕಾಗುತ್ತದೆ. 1937ರಲ್ಲಿ ನೆಹರೂ ನೇತೃತ್ವದ ಕಾಂಗ್ರೆಸ್ ಸಮಿತಿಯು ಕೆಲವು ಧಾರ್ಮಿಕ ಉಲ್ಲೇಖಗಳಿವೆ ಎಂಬ ಕಾರಣಕ್ಕೆ ಗೀತೆಯ ಕೊನೆಯ ನಾಲ್ಕು ಚರಣಗಳನ್ನು ಕೈಬಿಟ್ಟಿತ್ತು. ಈಗ ಆ ಹಳೆಯ ನಿರ್ಧಾರವನ್ನು ಬದಿಗೊತ್ತಿರುವ ಕೇಂದ್ರ ಸರ್ಕಾರ, ದುರ್ಗಾ ಮಾತೆ ಮತ್ತು ಸರಸ್ವತಿಯನ್ನು ಸ್ತುತಿಸುವ ಚರಣಗಳು ಸೇರಿದಂತೆ ಪೂರ್ಣ ಗೀತೆಯನ್ನು ಅಧಿಕೃತವಾಗಿ ಬಳಸಲು ಆದೇಶಿಸಿದೆ. ರಾಷ್ಟ್ರಪತಿಗಳು ಭಾಗವಹಿಸುವ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭಗಳಂತಹ ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲೂ ಇದು ಜಾರಿಗೆ ಬರಲಿದೆ.
ಸಿನಿಮಾ ಮಂದಿರಗಳಲ್ಲೂ ರಾಷ್ಟ್ರೀಯ ಗೀತೆ
ಸಿನಿಮಾ ಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲೂ ವಂದೇ ಮಾತರಂ ಗೀತೆಯನ್ನು ಪ್ರಸಾರ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ಚಿತ್ರಮಂದಿರಗಳಲ್ಲಿ ಗೀತೆ ಪ್ರಸಾರವಾಗುವಾಗ ಸಾರ್ವಜನಿಕರು ಎದ್ದು ನಿಲ್ಲುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಷ್ಟ್ರಗೀತೆಗೆ ನೀಡಲಾಗುವ ಗೌರವ ಮತ್ತು ರಕ್ಷಣೆಯನ್ನು ಇನ್ಮುಂದೆ ರಾಷ್ಟ್ರೀಯ ಗೀತೆಗೂ ವಿಸ್ತರಿಸಲಾಗಿದ್ದು, ಈ ಗೀತೆಗೆ ಅವಮಾನ ಮಾಡುವವರಿಗೆ ಅಥವಾ ಅಡ್ಡಿಪಡಿಸುವವರಿಗೆ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ ಅಡಿಯಲ್ಲಿ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜಕೀಯ ಸಂಘರ್ಷಕ್ಕೆ ನಾಂದಿ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಕತ್ತರಿಸಲಾಗಿದ್ದ ಚರಣಗಳನ್ನು ಮರುಸೇರ್ಪಡೆಗೊಳಿಸಿರುವುದು ‘ವಿಭಜಕ ರಾಜಕಾರಣ’ ಎಂದು ಕಾಂಗ್ರೆಸ್ ಟೀಕಿಸಿದ್ದರೆ, ಇತಿಹಾಸದ ತಪ್ಪನ್ನು ಸರಿಪಡಿಸಲಾಗುತ್ತಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಈ ಹಿಂದೆ ಪ್ರಧಾನಿ ಮೋದಿಯವರು ಈ ಚರಣಗಳನ್ನು ಕೈಬಿಟ್ಟ ನಿರ್ಧಾರವು ದೇಶದ ವಿಭಜನೆಗೆ ನಾಂದಿ ಹಾಡಿತ್ತು ಎಂದು ಟೀಕಿಸಿದ್ದರು.
ಇದನ್ನೂ ಓದಿ : ಬೀದರ್ನಲ್ಲಿ SSLC ವಿದ್ಯಾರ್ಥಿ ಆತ್ಮಹ*ತ್ಯೆ!


















