ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೆಂಬಂತೆ, ಬರೋಬ್ಬರಿ 20 ವರ್ಷಗಳ ಸುದೀರ್ಘ ಅಂತರದ ನಂತರ, ಮಹಾರಾಷ್ಟ್ರದ ಪ್ರಬಲ ರಾಜಕೀಯ ಶಕ್ತಿಯಾದ ಠಾಕ್ರೆ ಕುಟುಂಬದ ಕುಡಿಗಳು ಒಂದಾಗಿವೆ. ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೂ ಮುನ್ನ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮೈತ್ರಿ ಮಾಡಿಕೊಳ್ಳುವ ಮೂಲಕ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.
ಮರಾಠಿ ಅಸ್ಮಿತೆಯ ಮರುಹುಟ್ಟು
ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ ಠಾಕ್ರೆ, “ನಾನು ಅಧಿಕೃತವಾಗಿ ಶಿವಸೇನೆ ಮತ್ತು ಎಂಎನ್ಎಸ್ ಮೈತ್ರಿಯನ್ನು ಘೋಷಿಸುತ್ತಿದ್ದೇನೆ. ಇನ್ನು ಮುಂದೆ ಮುಂಬೈಗೆ ಮರಾಠಿ ಮೇಯರ್ ಸಿಗಲಿದ್ದಾರೆ,” ಎಂದು ಗುಡುಗಿದ್ದಾರೆ. ಅವರ ಪಕ್ಕದಲ್ಲೇ ಕುಳಿತಿದ್ದ ಉದ್ಧವ್ ಠಾಕ್ರೆ, “ಏನೇ ಆದರೂ ಸರಿ, ಮುಂಬೈ ನಮ್ಮದಾಗಿರುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೈತ್ರಿಯು ಮುಂಬೈನಲ್ಲಿ ಮರಾಠಿ ಅಸ್ಮಿತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಯೋಗಿ ಘೋಷವಾಕ್ಯವೇ ಈಗ ಇವರ ಅಸ್ತ್ರ!
ವಿಶೇಷವೆಂದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಳಸಿದ್ದ “ಬಟೇಂಗೆ ತೋ ಕಟೇಂಗೆ” (ನಾವು ವಿಭಜನೆಯಾದರೆ, ನಾಶವಾಗುತ್ತೇವೆ) ಎಂಬ ಜನಪ್ರಿಯ ಘೋಷಣೆಯನ್ನೇ ಉದ್ಧವ್ ಠಾಕ್ರೆ ತಮ್ಮ ಮೈತ್ರಿಯ ಅಡಿಪಾಯವನ್ನಾಗಿ ಬಳಸಿಕೊಂಡಿದ್ದಾರೆ. ಮರಾಠಿ ಮತಗಳು ಮತ್ತು ಹಿಂದುತ್ವದ ಮತಗಳು ವಿಭಜನೆಯಾಗಬಾರದು ಎಂಬ ಎಚ್ಚರಿಕೆಯನ್ನು ಅವರು ಈ ಮೂಲಕ ನೀಡಿದ್ದಾರೆ. ಶಿಂಧೆ ಬಣ ಮತ್ತು ಬಿಜೆಪಿ ಮೈತ್ರಿಕೂಟದಲ್ಲಿ ಅಸಮಾಧಾನಗೊಂಡಿರುವವರು ತಮ್ಮೊಂದಿಗೆ ಕೈಜೋಡಿಸುವಂತೆ ರಾಜ್ ಠಾಕ್ರೆ ಇದೇ ವೇಳೆ ಕರೆ ನೀಡಿದ್ದಾರೆ.
ಬಿಜೆಪಿಗೆ ಪಾಠ ಕಲಿಸಲು ಒಂದಾದ ಸಹೋದರರು
ಈ ಐತಿಹಾಸಿಕ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ್ ರಾವತ್, “ಬಾಳಾಸಾಹೇಬ್ ಠಾಕ್ರೆ ಅವರು ಮಣ್ಣಿನ ಮಕ್ಕಳಿಗಾಗಿ ಶಿವಸೇನೆಯನ್ನು ಸ್ಥಾಪಿಸಿದ್ದರು. ಕಳೆದ ಎರಡು ದಶಕಗಳಿಂದ ಠಾಕ್ರೆ ಸಹೋದರರು ದೂರವಿದ್ದದ್ದು ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟವುಂಟು ಮಾಡಿತು. ಈಗ ಮುಂಬೈನಲ್ಲಿ ನಡೆಯುತ್ತಿರುವ ಲೂಟಿಯನ್ನು ತಡೆಯಲು ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲು ಇಬ್ಬರೂ ಒಂದಾಗಿರುವುದು ಮರಾಠಿಗರಿಗೆ ಸಂತಸದ ವಿಷಯ,” ಎಂದು ಬಣ್ಣಿಸಿದರು.
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಬಿಎಂಸಿಗೆ ಜನವರಿ 15 ರಂದು ಚುನಾವಣೆ ನಡೆಯಲಿದ್ದು, ಈ ಹೊಸ ಮೈತ್ರಿ ಮಹಾರಾಷ್ಟ್ರದ ರಾಜಕೀಯ ಸಮೀಕರಣವನ್ನೇ ಬದಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಬಾಹ್ಯಾಕಾಶದಲ್ಲಿ ಇಸ್ರೋ ‘ಬಾಹುಬಲಿ’ ಘರ್ಜನೆ : ಅತ್ಯಂತ ಭಾರದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಎಲ್ವಿಎಂ-3 ರಾಕೆಟ್!



















