ಬೆಂಗಳೂರು : ರಾಜಾಜಿನಗರದಲ್ಲಿ ಡಿಸೆಂಬರ್ 19, 20, 21ರಂದು ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅಭಯ ಸೇವಾ ಫೌಂಡೇಶನ್ ಅಧ್ಯಕ್ಷ ಯು.ಬಿ ಉಮೇಶ್ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಡವರ, ನೊಂದವರ ಸೇವೆ ಮಾಡಲು ಮತ್ತು ಸಂಸ್ಕೃತಿ ಉಳಿಸಲು ಅಭಯ ಸೇವಾ ಫೌಂಡೇಶನ್ ಸ್ಥಾಪನೆಯಾಗಿದೆ. ಕಳೆದ ವರ್ಷ ಸೇವಾ ಸಂಕಲ್ಪ ಕಾರ್ಯಕ್ರಮ ಸಾವಿರಾರು ಜನರಿಗೆ ಉಪಯೋಗವಾಗಿದೆ. ಈ ಭಾರಿ ರಾಜಾಜಿಗರದ ಶ್ರೀ ರಾಮಮಂದಿರ ಆಟದ ಮೈದಾನದಲ್ಲಿ ಡಿಸೆಂಬರ್ 19, 20, 21ರ ಮೂರು ದಿನಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಲ್ಲಿ ಅಂಧಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಕಣ್ಣಿನ ತಪಾಸಣೆ ಮಾಡಲಾಗುತ್ತದೆ. ಮಾದಕವಸ್ತುಗಳ ಪಿಡುಗು, ಬಾಲ್ಯ ವಿವಾಹ, ಸಂಚಾರಿ ನಿಯಮ ಪಾಲನೆಗೆ ಬೀದಿ ನಾಟಕದ ಮೂಲಕ ರಾಜಾಜಿನಗರದ ಬೇರೆ ಬೇರೆ ಕಡೆ ಜಾಗೃತಿ ಅಭಿಯಾನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಾಗೆಯೇ ನವ ದುರ್ಗಾದೀಪ ನಮಸ್ಕಾರ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ. 108 ಕಳಸ ಪೂಜೆ, ಹೋಮ, ಹವನ ನವದುರ್ಗೆಯ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಯಲಿದೆ. ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಬಡವರ ಆರೋಗ್ಯ ತಪಾಸಣೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಹಾಗೂ ಕಣ್ಣಿನ ದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು, ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭರತನಾಟ್ಯ, ಹುಲಿವೇಷ, ಭಜನೆ, ಯಕ್ಷಗಾನ, ನಂದಗೋಕುಲ ತಂಡದ ನವಶಕ್ತಿ ವೈಭವ ನೃತ್ಯ, ಸವಿತಕ್ಕನ ಹಳ್ಳಿ ಬ್ಯಾಂಡ್, ಬೀಟ್ ಗುರೂಸ್ ಮ್ಯೂಸಿಕ್, ಪಂಜಿನ ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಅಭಯ ಸೇವಾ ಫೌಂಡೇಷನ್ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡಿ, ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಉಮೇಶ್ ಶೆಟ್ಟಿಯವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಯುಕೆಪಿ ಯೋಜನೆಯಿಂದ ಮುಳುಗಡೆಗೊಂಡ ಭೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಿದ್ಧ | ಡಿಕೆ ಶಿವಕುಮಾರ್



















