ಅಹಮದಾಬಾದ್: ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್ನಿಂದ ಟೀಕೆಗೆ ಗುರಿಯಾಗಿದ್ದ ಯುವ ಬ್ಯಾಟರ್ ಸಾಯಿ ಸುದರ್ಶನ್, ಚುಟುಕು ಮಾದರಿಯಲ್ಲಿ ತಮ್ಮ ಲಯವನ್ನು ಕಂಡುಕೊಂಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ತಮಿಳುನಾಡು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಸೌರಾಷ್ಟ್ರ ನೀಡಿದ್ದ 184 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ತಮಿಳುನಾಡು ತಂಡದ ಪರ ಸಾಯಿ ಸುದರ್ಶನ್ ಅಬ್ಬರಿಸಿದರು . ಕೇವಲ 55 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ ಅವರು, 10 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಬಾರಿಸಿದರು. ಅವರ ಈ ಅಮೋಘ ಆಟದಿಂದಾಗಿ ತಂಡವು ಸುಲಭವಾಗಿ ಗುರಿ ತಲುಪಿತು . ತಮಿಳುನಾಡು ತಂಡದ ಉಳಿದ ಬ್ಯಾಟರ್ಗಳು ವಿಫಲರಾದಾಗ, ಸುದರ್ಶನ್ ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೆಸ್ಟ್ನಲ್ಲಿ ಎದುರಾಗಿತ್ತು ಸಂಕಷ್ಟ:
ಭಾರತ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಆಡಲು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಂದ ಅವಕಾಶ ಪಡೆದಿದ್ದ ಸುದರ್ಶನ್, ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆಡಿದ ಆರು ಪಂದ್ಯಗಳಲ್ಲಿ ಕೇವಲ ಎರಡು ಅರ್ಧಶತಕಗಳನ್ನು ಮಾತ್ರ ಗಳಿಸಿದ್ದರು . ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 87 ರನ್ಗಳೇ ಅವರ ಉತ್ತಮ ಪ್ರದರ್ಶನವಾಗಿತ್ತು. ತಾಂತ್ರಿಕ ದೋಷಗಳಿಂದಾಗಿ ಅವರು ಇಂಗ್ಲೆಂಡ್ ಪ್ರವಾಸ ಮತ್ತು ತವರಿನ ಪಂದ್ಯಗಳಲ್ಲಿಯೂ ರನ್ ಗಳಿಸಲು ಪರದಾಡಿದ್ದರು, ಇದರಿಂದಾಗಿ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಈ ಶತಕದ ಮೂಲಕ 24 ವರ್ಷದ ಸಾಯಿ ಸುದರ್ಶನ್, ತಮ್ಮ ಮೇಲಿನ ಎಲ್ಲಾ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಈ ಪ್ರದರ್ಶನವು ಐಪಿಎಲ್ನಲ್ಲಿ ಅವರ ಫ್ರಾಂಚೈಸಿ ಗುಜರಾತ್ ಟೈಟನ್ಸ್ಗೂ ಸಂತಸ ತಂದಿದೆ .
ಇದನ್ನೂ ಓದಿ: ವಿರಾಟ್-ರೋಹಿತ್ ಸಾಮರ್ಥ್ಯ ಸಾಬೀತುಪಡಿಸಬೇಕೆನ್ನುವುದು ಹಾಸ್ಯಾಸ್ಪದ: ಟೀಕಾಕಾರರಿಗೆ ಅಶ್ವಿನ್ ತಿರುಗೇಟು


















