ಪೆಹಲ್ಗಾಮ್ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಲ್ ರೌಂಡರ್ ಪ್ರದರ್ಶನ ನೀಡಿ ಏಷ್ಯಾಕಪ್ನಲ್ಲಿ ಸತತ 2ನೇ ಜಯ ಸಾಧಿಸಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಮೆರದಿದೆ.
ಟೀಮ್ ಇಂಡಿಯಾ ಸೂಪರ್ 4 ಖಚಿತಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ಗಳಿಸುವಷ್ಟರಲ್ಲೇ ಸುಸ್ತಾಗಿತ್ತು. 128 ರನ್ಗಳ ಸಾಧಾರಣ ಗುರಿಯ ಬೆನ್ನು ಹತ್ತಿದ ಭಾರತ ತಂಡ ಕೇವಲ 15.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ
ಭಾರತ ತಂಡಕ್ಕೆ 2ನೇ ಓವರ್ನಲ್ಲಿ ಆಘಾತ ಎದುರಾಯಿತು. ತಂಡ 22 ರನ್ಗಳಿಸುವಷ್ಟರಲ್ಲಿ ಉಪನಾಯಕ ಶುಭ್ಮನ್ ಗಿಲ್ ಕೇವಲ 10 (7 ಎಸೆತ) ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸೈಮ್ ಅಯೂಬ್ ಬೌಲಿಂಗ್ನಲ್ಲಿ ಸತತ 2 ಬೌಂಡರಿ ಸಿಡಿಸಿ ಸ್ಟಂಪ್ ಆದರು. ಬಳಿಕ ಅಭಿಷೇಕ್ ಶರ್ಮಾ ಕೂಡ 4ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನೆದುರಿಸಿದ ಶರ್ಮಾ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 31 ರನ್ಗಳಿಸಿ ಔಟ್ ಆದರು. ಇಬ್ಬರು ಸೈಮ್ ಅಯೂಬ್ಗೆ ವಿಕೆಟ್ ಒಪ್ಪಿಸಿದರು.
3ನೇ ವಿಕೆಟ್ಗೆ ಜೊತೆಯಾದ ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ವಿಕೆಟ್ ಉಳಿಸಲು ನಿಧಾನಗತಿ ಬ್ಯಾಟ್ ಬೀಸಿದರು. ಇವರಿಬ್ಬರು 3ನೇ ವಿಕೆಟ್ಗೆ 52 ಎಸೆತಗಳಲ್ಲಿ 56 ರನ್ಗಳ ಜೊತೆಯಾಟ ನಡೆಸಿದರು. ತಿಲಕ್ ವರ್ಮಾ 31 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 31 ರನ್ಗಳಿಸಿ ಸೈಮ್ ಅಯೂಬ್ ಬೌಲಿಂಗ್ನಲ್ಲಿ ವಿಕೇಟ್ ಒಪ್ಪಿಸಿದರು.
5ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ನಾಯಕ ಸೂರ್ಯಕುಮಾರ್ ಯಾದವ್ ಜೊತೆಗೂಡಿ 5ನೇ ವಿಕೆಟ್ಗೆ ಮುರಿಯದ 34 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಇನ್ನು 25 ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿ ಸಹಸ್ರ ಸಂಖ್ಯೆಯ ಭಾರತೀಯ ಕ್ರಿಕೇಟ್ ಅಭಿಮಾನಿಗಳಲ್ಲಿ ನಗು ಬೀರಿಸಿದರು. ಸೂರ್ಯಕುಮಾರ್ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 47 ರನ್ಗಳಿಸಿದರೆ, ಶಿವಂ ದುಬೆ 7 ಎಸೆತಗಳಲ್ಲಿ ಅಜೇಯ 11 ರನ್ಗಳಿಸಿದರು.
ಇದು ಏಷ್ಯಾಕಪ್ ಟಿ20ಯಲ್ಲಿ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಸಿಕ್ಕಂತಹ 4ನೇ ಜಯವಾಗಿದೆ. 5 ಪಂದ್ಯಗಳ ಮುಖಾಮುಖಿಯಲ್ಲಿ ಪಾಕ್ ಕೇವಲ 1 ರಲ್ಲಿ ಮಾತ್ರ ಜಯ ಕಂಡಿದೆ.



















