ಬೆಂಗಳೂರು: ಶರಣಬಸಪ್ಪ ಅಪ್ಪನವರಿಗೆ ಅಧಿವೇಶನದಲ್ಲಿ ಸಂತಾಪ ಸೂಚನೆ ವೇಳೆ ಅಪಮಾನವಾಗಿದೆ ಎಂದು ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ್ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಆ.18ರಂದು ನಡೆದ ಕಲಾಪದಲ್ಲಿ ಸಂತಾಪ ಸೂಚನೆ ನಿರ್ಣಯದಲ್ಲಿ ಪಾಲ್ಗೊಂಡು, ದಾಸೋಹ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪನವರಿಗೆ ಸಂತಾಪ ಸೂಚನೆ ಮಾತನಾಡುತ್ತಿದ್ದ ವೇಳೆಯಲ್ಲಿ ಸಭಾಧ್ಯಕ್ಷರು “ತಾವು ನಮಗೆ ಭಾಷಣ ಮಾಡಬೇಡಿ. ನನ್ನ ಕೊಠಡಿಗೆ ಬಂದು ಭೇಟಿ ಮಾಡಿ” ಎಂದಿರುವುದು ಪೂಜ್ಯರಿಗೆ ಮಾಡಿರುವ ಅಪಮಾನ ಎಂದು ಪತ್ರದ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಸಂತಾಪ ಸೂಚನೆ ಮಾಡುವಾಗ ಪೂಜ್ಯರ ಸಾಧನೆ, ಅವರ ಇತಿಹಾಸವನ್ನು ಮೆಲುಕುಹಾಕುವುದು ಸಂಪ್ರದಾಯವಾಗಿರುತ್ತದೆ. ಸದನದಲ್ಲಿ ಸಂತಾಪ ಸೂಚನೆ ತಂದಿದ್ದಕ್ಕೆ ಆ ಭಾಗದಿಂದ ಬಂದಿರುವ ಶಾಸಕರಾದ ನಾನು ಪೂಜ್ಯರ ಸಾಧನೆ ಅವರ ಇತಿಹಾಸವನ್ನು ಸದನಕ್ಕೆ ತಿಳಿಸುವುದು ಆ ಭಾಗದ ಜನಪ್ರತಿನಿಧಿಯಾಗಿ ಅದು ನನ್ನ ಕರ್ತವ್ಯವಾಗಿರುತ್ತದೆ.”
“ಮೊದಲ ಬಾರಿಗೆ ಆಯ್ಕೆಯಾಗಿ ಬಂದಿರುವ ಶಾಸಕರುಗಳು ಮಾತನಾಡುವಾಗ ತಿಳಿಯದೇ ತಪ್ಪಾಗಿ ಮಾತನಾಡಿದರೆ ತಾವು ನೂತನ ಶಾಸಕರುಗಳಿಗೆ ಎಷ್ಟೋ ಬಾರಿ ಅಪಮಾನ ಮಾಡಿರುವ ಉದಾಹರಣೆಗಳಿವೆ. ನೂತನ ಶಾಸಕರುಗಳು ಸದನದಲ್ಲಿ ಪ್ರಶ್ನೆಗಳನ್ನು ಸರ್ಕಾರದ ಗಮನಕ್ಕೆ ತಂದಾಗ ಹೆಚ್ಚು ಸಮಯವನ್ನು ನೀಡದೇ ಸಚಿವರ ಕೊಠಡಿಗಳಿಗೆ ಹೋಗಿ ಮಾತನಾಡಿ ಎಂದು ಹಾರಿಕೆ ಉತ್ತರ ನೀಡುವುದು ಸರಿಯಲ್ಲ. ಸಚಿವರ ಕೊಠಡಿಗೆ ಹೋಗುವುದಾದರೆ ಸದನದ ಕಲಾಪಗಳು ನಡೆಸುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
“ಈ ರೀತಿ ಅನೇಕ ಭಾರಿ ನೂತನ ಶಾಸಕರುಗಳಿಗೆ ಅಗೌರವ ಉಂಟುಮಾಡಿದಾಗ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಸದಸ್ಯರಿಗೆ ವಿವಿಧ ರೀತಿ ಮುಜುಗರ ಉಂಟಾಗಿರುತ್ತದೆ.”
“ಈ ಸಂತಾಪ ಸೂಚನೆಯಲ್ಲಿ ಕಲಬುರಗಿಯ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪನವರಿಗೆ ಅಪಮಾನ ಉಂಟು ಮಾಡಿರುವುದು ಇದು ಖಂಡನೀಯ ಮತ್ತು ಸದನದಲ್ಲಿ ಶಾಸಕರುಗಳಿಗೆ ಅಪಮಾನ ಮಾಡುವುದು ಧೋರಣೆಯಾಗಿದೆ. ತಮ್ಮ ದೋರಣೆಯನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಅನೇಕ ನೂತನ ಶಾಸಕರುಗಳ ಅಭಿಪ್ರಾಯವಾಗಿದೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.




















