ನಾವನಲ್ಲ…ನಾನವನಲ್ಲ…ನಾನವನಲ್ಲ…ನೀವೆಲ್ಲಾ ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾವನ್ನು ನೋಡೇ ಇರ್ತೀರ…ಇದರಲ್ಲಿ ವಂಚಿಸಿದ ವ್ಯಕ್ತಿ ಅವನು ನಾನಲ್ಲ, ನಾನೇ ಬೇರೆ ಅಂತಾ ವಾದ ಮಾಡ್ತಾನೆ. ಅರೆ ಇದೇನಪ್ಪಾ ಬುದ್ಧಿವಂತ ಸಿನಿಮಾ ಕತೆಯನ್ಯಾಕೆ ನಾವಿಲ್ಲಿ ಹೇಳ್ತಿದ್ದೀವಿ ಅಂತಾ ಅಂದುಕೊಂಡ್ರಾ. ಯೆಸ್ ಅಲ್ಲೇ ಇರೋದು ಬಿಗ್ ಟ್ವಿಸ್ಟ್, ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ದುರಂತದ ಹೊಣೆಯನ್ನೀಗ ಒಬ್ಬರ ಹೆಗಲಿಂದ ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುವ ಕಾರ್ಯ ನಡೆದಿದೆ.
ಮರಣ ಮೃದಂಗಕ್ಕೆ ಸರ್ಕಾರ-KSCA ನೇರ ಹೊಣೆ ಎಂದ DNA
ಜೂನ್ 4ರ ಆರ್ ಸಿಬಿ ವಿಜಯೋತ್ಸವ ವೇಳೆ 12 ಮಂದಿ ಸಾವಿನ ವಿಚಾರದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಕಾರ್ಯಕ್ರಮದ ಆಯೋಜಕ ಡಿಎನ್ ಎ ಸಂಸ್ಥೆಯೇ ನೇರ ಹೊಣೆ ಅಂತಾ ಸರ್ಕಾರ ಆರೋಪಿಸಿದೆ. ಈ ಹಿನ್ನಲೆಯಲ್ಲೇ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವ ಡಿಎನ್ ಎ, ಇದೀಗ ನೇರ ಸರ್ಕಾರದ ವಿರುದ್ಧವೇ ಆರೋಪಗಳ ಸುರಿಮಳೆಗೈದಿದೆ.
ಎರಡು ಕಡೆ ಕಾರ್ಯಕ್ರಮ ಆಯೋಜಿಸಿ ಅವಾಂತರ
ಹೈಕೋರ್ಟ್ ಗೆ ಸಲ್ಲಿಸಲಾಗಿರುವ ರಿಟ್ ಅರ್ಜಿಯಲ್ಲಿ ಡಿಎನ್ ಎ ಕೆಲ ವಿಚಾರಗಳನ್ನು ಉಲ್ಲೇಖಿಸಿದೆ. ಅದರಲ್ಲೂ ನೇರಾನೇರ ಸರ್ಕಾರದ ವಿರುದ್ಧವೇ ಮುಗಿಬಿದ್ದಿರೋ ಸಂಸ್ಥೆ, ವಿಧಾನಸೌಧ ಮತ್ತು ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜಸಿದ್ದೇ ಅವಾಂತರಕ್ಕೆ ಕಾರಣ ಎಂದಿದೆ. ಹಾಗಂತಾ 2 ಕಡೆ ಕಾರ್ಯಕ್ರಮವನ್ನು ಯೋಜಿಸಿದ್ದೇ ರಾಜ್ಯ ಸರ್ಕಾರ ಮತ್ತು ಕೆಎಸ್ ಸಿಎ ಅಂದಿದೆ.
ವಿಜಯೋತ್ಸವದಲ್ಲಿ ಭಾಗಿಯಾಗುವಂತೆ ಕರೆ ಕೊಟ್ಟಿದ್ದೇ ಸರ್ಕಾರ
ಎರಡನೇ ಆರೋಪದಲ್ಲಿ ಆರ್ ಸಿಬಿ ವಿಜಯೋತ್ಸವ ಆಚರಿಸಲಾಗುತ್ತಿದೆ. ವಿಧಾನಸೌಧ ಮುಂಭಾಗದಲ್ಲೇ ಅದ್ಧೂರಿ ಕಾರ್ಯಕ್ರಮ ಎನ್ನುವ ಮಾಹಿತಿಯನ್ನು ನಾಡಿನ ಜನತೆಗೆ ಕೊಟ್ಟಿದ್ದೇ ರಾಜ್ಯ ಸರ್ಕಾರ. ಸರ್ಕಾರದ ಈ ಮಾಹಿತಿಯಿಂದಲೇ ಅಪಾರ ಜನಸಾಗರ ಹರಿದು ಬಂದಿದ್ದು ಅಂತಲೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ವಿಧಾನಸೌಧಕ್ಕೆ ಭದ್ರತೆ-ಸ್ಟೇಡಿಯಂನಲ್ಲಿ ನಿರ್ಲಕ್ಷ್ಯ
ಮೊದಲಿಗೆ ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿ ಪೊಲೀಸ್ ಇಲಾಖೆ ಅಗತ್ಯ ಸಿಬ್ಬಂದಿ ನಿಯೋಜಿಸಿತ್ತು. ಹೀಗಾಗಿ ಅಲ್ಲಿ ಅಂಥಾ ದೊಡ್ಡ ಅವಘಡಗಳು ಘಟಿಸಲಿಲ್ಲ. ಆದ್ರೆ ಚಿನ್ನಸ್ವಾಮಿ ಮೈದಾನದಲ್ಲಿ ಅಗತ್ಯಕ್ಕೆ ಅನುಸಾರವಾಗಿ ಪೊಲೀಸರನ್ನು ನಿಯೋಜಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಡಿಎನ್ ಎ, ಪೊಲೀಸರಿಗಾಗಿ 2450 ಊಟದ ಪೊಟ್ಟಣಗಳನ್ನು ಸಿದ್ಧಗೊಳಿಸಿತ್ತು. ಇಲಾಖೆ ಸ್ವೀಕರಿಸಿದ್ದು ಮಾತ್ರ ಕೇವಲ 600 ಪೊಟ್ಟಣಗಳನ್ನು ಅಂತಾ ದೂರಿದೆ. ಇದರ ಮೂಲಕವೇ ಮೈದಾನದ ಬಳಿ ಸುರಕ್ಷತೆಗೆ ಅಸಡ್ಡೆ ತೋರಲಾಗಿತ್ತು ಅಂತಲೂ ಪ್ರಸ್ತಾಪಿಸಲಾಗಿದೆ.
ಒಂದು ಗೇಟ್-ಪೊಲೀಸರಿಂದ ಲಾಠಿ ಚಾರ್ಜ್
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶಕ್ಕೆ ಚಿಕ್ಕ ಗೇಟ್ ನ್ನ ಮಾತ್ರ ತೆರೆಯಲಾಗಿತ್ತು ಇದು ದೊಡ್ಡ ಪ್ರಮಾದಕ್ಕೆ ದಾರಿ ಮಾಡಿಕೊಡ್ತು. ಏಕಾಏಕಿ ಜನ ನುಗ್ಗುತ್ತಿದ್ದಂತೆ ನಿಯಂತ್ರಿಸಲಾಗದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ತರಾತುರಿಯಲ್ಲೇ ಕಾಲ್ತುಳಿತ ಸಂಭವಿಸಿದೆ ಅಂತಲೂ ಡಿಎನ್ ಎ ನೇರಾ ನೇರ ಸರ್ಕಾರ ಮತ್ತು ಕೆಎಸ್ಸಿಎ ವಿರುದ್ಧ ಆರೋಪ ಮಾಡಿದೆ.
ಮುಂಬೈನಲ್ಲಿ ಎಲ್ಲ ಓಕೆ, ಇಲ್ಯಾಕೆ ಹಿಂಗೆ
ಭಾರತ ಟಿ 20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲೂ ವಿಕ್ಟರಿ ಪರೇಡ್ ಆಯೋಜಿಸಲಾಗಿತ್ತು. ಅಂದಿನ ಕಾರ್ಯಕ್ರಮವನ್ನೂ ನನ್ಮ ಸಂಸ್ಥೆಯೇ ಆಯೋಜಿಸಿತ್ತು. ಅಂದು 3 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ರು. ಆಷ್ಟೇ ಅಲ್ಲಾ ವಾಂಖೆಡೆ ಮೈದಾನದ ಸಾಮರ್ಥ್ಯ ಕೂಡಾ ಕೇವಲ 32 ಸಾವಿರ. ಅಂಥದ್ರಲ್ಲಿ ಅಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಆಯೋಜಿಸಿದೆ. ಆದ್ರೆ ಬೆಂಗಗಳೂರಲ್ಲಿ ಅವಘಡವಾಗಲು ಸರ್ಕಾರದ ಆತುರ ಮತ್ತು ನಿರ್ಲಕ್ಷ್ಯವೇ ಕಾರಣ ಅಂತೂ ದೂರಲಾಗಿದೆ. ಒಟ್ನಲ್ಲಿ, ಇದ್ದ ಮೂವರ ಪೈಕಿ ನಿಜಕ್ಕೂ ಕದ್ದವರ್ಯಾರು ಎನ್ನುವಂತಾಗಿದೆ ಈ ಕಿತ್ತಾಟ.