ಆಪರೇಷನ್ ಸಿಂಧೂರ್…ಭಾರತದ ಪರಾಕ್ರಮವನ್ನ ಜಗತ್ತಿನ ಮುಂದೆ ಅನಾವರಣ ಮಾಡಿದ ಬಲು ದೊಡ್ಡ ಕಾರ್ಯಾಚರಣೆ. ಹಿಂದೂಸ್ತಾನದ ಈ ದಾಳಿ 100ಕ್ಕೂ ಹೆಚ್ಚು ಉಗ್ರರನ್ನ ಸಂಹರಿಸಿದ್ದಲ್ಲದೆ, ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗೆ ಹೊಡೆತ ಕೊಟ್ಟಿತ್ತು. ಆದ್ರೆ ಇದೆಲ್ಲಾ ಇತಿಹಾಸ, ಅಸಲಿ ಮ್ಯಾಟರ್ ಇರೋದೇ ಬೇರೆ. ಆಪರೇಷನ್ ಸಿಂಧೂರ್ ಕ್ಕೆ ಪ್ರತೀಕಾರದ ಅಸ್ತ್ರ ಹೂಡಿದ್ದ ಪಾಕ್ ಇವತ್ತು ಅಮೆರಿಕ ಕಾಲಿಗೆ ಬಿದ್ದು ಸಂಧಾನ ಮಾಡಿಸಿಕೊಂಡಿದೆ. ಆದ್ರೆ ಅವತ್ತು ಪಾಕಿಗೆ ನೆರವು ನೀಡಿದ್ದ ಟರ್ಕಿ ಮಾತ್ರ ಮತ್ತಿನ್ನೆಂದೂ ಮೇಲೇಳದಂತೆ ಬೋರಲು ಬಿದ್ದಿದೆ.
ಡ್ರೋನ್ ಬಳಕೆಗೆ ಟರ್ಕಿ ಸೈನಿಕರೇ ಅಖಾಡಕ್ಕೆ
ಭಾರತದ ಪಂಜಾಬ್, ರಾಜಸ್ತಾನಗಳ ಮೇಲೆ ಪಾಕ್ ರಾತ್ರೋ ರಾತ್ರಿ ಡ್ರೋನ್ ದಾಳಿ ಶುರುಮಾಡಿತ್ತು. ಗಡಿ ದಾಟಿ ಬಂದಿದ್ದ ಶತ್ರು ರಾಷ್ಟ್ರದ ಡ್ರೋನ್ ಪಡೆ ಭಾರತದ ನಾಗರೀಕರು ಸೇರಿದಂತೆ ಶಾಲೆ, ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡಿದ್ದವು. ಅಸಲಿಗೆ ಈ ಡ್ರೋನ್ ಗಳ ಹಿಂದೆ ಕುಳಿತು ಕೆಲಸ ಮಾಡಿದ್ದು ಪಾಕಿಗಳಲ್ಲ ಬದಲಿಗೆ ಟರ್ಕಿಗಳು ಅನ್ನೋ ಸತ್ಯವೀಗ ಜಗತ್ ಜಾಹೀರಾಗಿದೆ. ಅಚ್ಚರಿಯಾದ್ರು ಇದು ಸತ್ಯ. ಕೇವಲ ಡ್ರೋನ್ ನೀಡಿ ತೆಪ್ಪಗಾಗಿದೆ ಟರ್ಕಿ ಅಂದುಕೊಂಡವರಿಗೆ ಆ ದೇಶದ ನಸುಗುನ್ನಿ ನಾಟಕ ಅನಾವರಣವಾಗಿದೆ. ಭಾರತದ ಮೇಲೆ ಹಾರಿ ಬಂದ ಡ್ರೋನ್ ಗಳನ್ನು ಅಪರೇಟ್ ಮಾಡಿದ್ದು ಟರ್ಕಿ ಯೋಧರೇ. ಅಷ್ಟೇ ಅಲ್ಲಾ ಹೀಗೆ ಡ್ರೋನ್ ಗೆ ಕಣ್ಣಾಗಿದ್ದ ಟರ್ಕಿಯ ಇಬ್ಬರು ಯೋಧರು ಭಾರತದ ಪ್ರತಿದಾಳಿಗೆ ಪ್ರಾಣತೆತ್ತಿದ್ದಾರೆ.
ತನ್ನ ಸಮಾಧಿ ತಾನೇ ತೋಡಿಕೊಂಡ ಪುಟ್ಟ ರಾಷ್ಟ್ರ
ಅದು 2023….ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪನವನ್ನು ಟರ್ಕಿ ಅನುಭವಿಸಿತ್ತು. ಸಮಸ್ತ ದೇಶವೇ ಅಲ್ಲೋಲ ಕಲ್ಲೋಲವಾಗಿ ತುರ್ತು ಪರಿಸ್ಥಿತಿಯಲ್ಲಿತ್ತು. ಇಂಥಾ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಟರ್ಕಿಗೆ ನೆರವಿನ ಹಸ್ತ ನೀಡಿದ್ರು. ಆಪರೇಷನ್ ದೋಸ್ತ್ ಹೆಸರಿನಲ್ಲಿ ಭಾರತೀಯ ಸೇನೆ ಅಖಾಡಕ್ಕೆ ಇಳಿದಿತ್ತು. ಕಂಪನದಿಂದ ತತ್ತರಿಸಿದ್ದ ದೇಶಕ್ಕೆ 7 ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಭಾರತದ ಸಿ 17 ಯುದ್ಧ ವಿಮಾನ ಹೊತ್ತು ಹೋಗಿತ್ತು. ಸಾಲದ್ದಕ್ಕೆ 47 ಜನರ ಎನ್ ಡಿಆರ್ ಎಫ್ ತಂಡವೂ ಟರ್ಕಿಯ ಭೂಕಂಪ ಸಂತ್ರಸ್ತರ ಬಚಾವ್ ಮಾಡೋ ಕಾರ್ಯದಲ್ಲಿ ತೊಡಗಿತ್ತು. ಆದ್ರೆ ಇದನ್ನ ಅದೆಷ್ಟು ಬೇಗ ಮರೆತು ಪಾಕಿಗೆ ನೆರವಾಯ್ತಾ ಅನ್ನೋದು ಈಗಿರುವ ಪ್ರಶ್ನೆ.
ಟರ್ಕಿಯ ಆರ್ಥಿಕತೆಗೆ ಭಾರತದಿಂದ ದೊಡ್ಡ ಪೆಟ್ಟು
ಪಾಕಿಸ್ತಾನ ಪರ ನಿಂತ ಟರ್ಕಿ ಇವತ್ತು ನಡು ರಸ್ತೆಯಲ್ಲಿ ನಿಂತು ನಮ್ಮಿಂದ ತಪ್ಪಾಗಿದೆ ಅಂತಾ ಕಣ್ಣೀರಿಡ್ತಿದೆ. ಇದಕ್ಕೆ ಮೂಲ ಕಾರಣ ಆ ದೇಶದ ಆರ್ಥಿಕ ಬಲವೇ ಪ್ರವಾಸೋದ್ಯಮ. ಅದ್ರಲ್ಲೂ ಭಾರತೀಯರೇ ಹೆಚ್ಚಾಗಿ ಈ ದೇಶಕ್ಕೆ ಭೇಟಿ ನೀಡೋದು. ಯಾವಾಗ ಟರ್ಕಿಯ ಡಬಲ್ ಗೇಮ್ ಬಯಲಾಯ್ತೋ ಭಾರತದಲ್ಲೊಂದು ಅಭಿಯಾನ ಆರಂಭವಾಯ್ತು. ಬಾಯ್ಕಾಟ್ ಟರ್ಕಿ ಅಂತಾ. ಟರ್ಕಿ ಮತ್ತು ಅಜರ್ ಭೈಜಾನ್ ಗೆ ಪ್ರವಾಸ ಆಯೋಜಿಸೋದನ್ನೇ ಟ್ರಾವೆಲ್ ಏಜೆನ್ಸಿಗಳು ನಿಲ್ಲಿಸಿವೆ. ಹಾಗೆ ನೋಡಿದ್ರೆ ಕಳೆದ ವರ್ಷ 4 ಸಾವಿರ ಕೋಟಿ ಭಾರತೀಯರ ಪ್ರವಾಸೋದ್ಯಮದಿಂದಲೇ ಈ ದೇಶ ಗಳಿಸಿತ್ತು. ಆದ್ರೀಗ ಟರ್ಕಿ ಪ್ರವಾಸದೊಟ್ಟಿಗೆ ಬಾಲಿವುಡ್ ಸೇರಿದಂತೆ ದಕ್ಷಿಣದ ಸಿನಿಮಾಗಳ ಚಿತ್ರೀಕರಣಗಳನ್ನು ಕೂಡಾ ಟರ್ಕಿಯಲ್ಲಿ ಮಾಡದಿರಲು ನಿರ್ಧಾರಿಸಲಾಗಿದೆ. ಹೀಗಾಗಿ ಈ ವರ್ಷದ ಆದಾಯ ಸಂಪೂರ್ಣ ಖೋತಾ ಆಗ್ತಿದೆ. ನಿಜಕ್ಕೂ ಭಾರತದ ದೋಸ್ತಿಯನ್ನೇ ಮರೆತವರೀಗ ಮಾಡಿದ ತಪ್ಪಿಗೆ ಕಣ್ಣೀರು ಹಾಕಿದ್ರೆ ಏನು ಲಾಭ.