ತುಮಕೂರು: ಕರ್ನಾಟಕದ ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಸೌರಶಕ್ತಿಯ ಬಳಕೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತರುವ ಗುರಿಯೊಂದಿಗೆ ಸಿಗ್ನಿಫೈ ಸಂಸ್ಥೆಯು ಸೆಲ್ಕೊ ಫೌಂಡೇಷನ್ನೊಂದಿಗೆ ಸಹಯೋಗದಲ್ಲಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿ.ಎಚ್.ಸಿ) ಸೌರಶಕ್ತಿಗೆ ಪರಿವರ್ತಿಸಿದೆ. ಈ ಸಿ.ಎಸ್.ಆರ್ ಉಪಕ್ರಮವು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಜೊತೆಗೆ ಪರಿಸರ ಸಂರಕ್ಷಣೆಗೂ ಕೊಡುಗೆ ನೀಡುತ್ತದೆ. ಈ ಯೋಜನೆಯ ಮೂಲಕ ಪ್ರತಿ ಪಿ.ಎಚ್.ಸಿ ವಾರ್ಷಿಕ 7,000 ಯೂನಿಟ್ ವಿದ್ಯುಚ್ಛಕ್ತಿ ಉಳಿತಾಯ ಮಾಡಲಿದ್ದು, ಒಟ್ಟಾರೆ 70,000 ಯೂನಿಟ್ ಉಳಿತಾಯದ ಗುರಿಯನ್ನು ಹೊಂದಿದೆ.
ಪ್ರತಿ ಕೇಂದ್ರವು 5 ಕೆ.ಡಬ್ಲ್ಯೂ ಸೌರ ಪ್ಯಾನಲ್, 19.2 ಕೆ.ಡಬ್ಲ್ಯೂ.ಎಚ್ ಬ್ಯಾಟರಿ ಮತ್ತು 6 ಕೆವಿಎ ಸೌರ ಪಿಸಿಯು ಹೊಂದಿದ್ದು, ತಡೆರಹಿತ ವಿದ್ಯುತ್ ಪೂರೈಕೆಯೊಂದಿಗೆ ದೀಪಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ. ಈ ಯೋಜನೆಯು ಡೀಸೆಲ್ ಜನರೇಟರ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಚ್ಛ ಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ. ಇದರಿಂದ ಸುಮಾರು 5 ಲಕ್ಷ ಗ್ರಾಮೀಣ ಫಲಾನುಭವಿಗಳಿಗೆ ಸುಧಾರಿತ ಆರೋಗ್ಯ ಸೇವೆ ದೊರೆಯಲಿದೆ.

ತುಮಕೂರಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಕಛೇರಿಯ ಟಿ.ಬಿ ಅಧಿಕಾರಿ ಡಾ. ಮೋಹನ್ ದಾಸ್, ಸಿರಾ ಬ್ಲಾಕ್ ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ಧೇಶ್ವರ ಮತ್ತು ಗ್ರಾಮ ಪಂಚಾಯಿತಿ ಗಣ್ಯರು ಭಾಗವಹಿಸಿದ್ದರು. ಸಿಗ್ನಿಫೈ ಗ್ರೇಟರ್ ಇಂಡಿಯಾದ ಮಾರ್ಕೆಟಿಂಗ್, ಸ್ಟ್ರಾಟಜಿ, ಗವರ್ನಮೆಂಟ್ ಆಫೀಸರ್ ಮತ್ತು ಸಿ.ಎಸ್.ಆರ್ ಮುಖ್ಯಸ್ಥ ನಿಖಿಲ್ ಗುಪ್ತಾ ಮಾತನಾಡಿ, “ಗ್ರಾಮೀಣ ಕರ್ನಾಟಕದಲ್ಲಿ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯ ಮೂಲಕ ಆರೋಗ್ಯ ಸೇವೆಯನ್ನು ಸುಧಾರಿಸುವ ಈ ಉಪಕ್ರಮದಲ್ಲಿ ಸೆಲ್ಕೊ ಫೌಂಡೇಷನ್ನೊಂದಿಗೆ ಸಹಯೋಗಿಸಲು ಹೆಮ್ಮೆಪಡುತ್ತೇವೆ,” ಎಂದರು.
ಸ್ವಾಸ್ಥ್ಯಕಿರಣ್ ಯೋಜನೆಯು ತುಮಕೂರು (4), ಬೆಂಗಳೂರು ನಗರ (3), ಕೋಲಾರ (1) ಮತ್ತು ಮೈಸೂರು (2) ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯು ಸುಸ್ಥಿರ ಪರಿಸರವನ್ನು ಸೃಷ್ಟಿಸುವ ಜೊತೆಗೆ ಆರೋಗ್ಯ ಸೇವೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.