ಕಲಬುರ್ಗಿ : ಇದು ಜಾತಿಗಣತಿ ಅಲ್ಲ. ಇದು ವೈಜ್ಞಾನಿಕವಾಗಿ ಆಗಿದೆಯೋ? ಅಥವಾ ಅವೈಜ್ಞಾನಿಕವಾಗಿ ಆಗಿದೆಯೋ? ನಾಳೆ ಪರಿಷ್ಕರಣೆ ಆಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕ್ಯಾಬಿನೆಟ್ ನಲ್ಲಿ ಪರಿಷ್ಕರಣೆ ಆಗುತ್ತದೆ. ಯಾರೂ ಅವಸರ ಮಾಡುವುದು ಬೇಡ. ನಾವು ಜಾಸ್ತಿ. ನೀವು ಜಾಸ್ತಿ ಅನ್ನೋ ಪ್ರಶ್ನೆ ಇಲ್ಲ. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗದವರು ಯಾವ ಸ್ಥಿತಿಗತಿಯಲ್ಲಿದ್ದಾರೆ ಅಂತಾ ನೋಡುವ ಸಮೀಕ್ಷೆ ಅಷ್ಟೆ. ಅದರಲ್ಲಿ ಏನಿದೆ? ಎಂಬುವುದನ್ನು ನೋಡಿದ ಮೇಲೆಯೇ ವಿರೋಧ ಮಾಡಲಿ. ಅವರು ಕೊಟ್ಟಿರುವ ಹತ್ತು ಶಿಫಾರಸ್ಸು ತೆಗೆದುಕೊಳ್ಳಬೇಕು ಅಂತೆನಿಲ್ಲ. ಹತ್ತನ್ನೂ ರಿಜೆಕ್ಟ್ ಮಾಡಬಹುದು. ಉತ್ತಮ ಶಿಫಾರಸ್ಸು ಇದ್ದರೆ ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.
ಲಿಂಗಾಯಿತ, ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸಮುದಾಯಗಳಿಗೆ ಅನ್ಯಾಯ ಆದ ಹಾಗೆ ಅನಿಸಿದರೆ, ಆ ಲೋಪ ದೋಷಗಳನ್ನು ಸರಿಪಡಿಸೋಣ ಎಂದಿದ್ದಾರೆ.