ಮಡಿಕೇರಿ: ಒಂದು ವರ್ಷದಿಂದ ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಕಾಜೂರು ಕರ್ಣ ಬಲೆಗೆ ಬಿದ್ದಿರಲಿಲ್ಲ. ಪುಂಡಾಟ ನಡೆಸುತ್ತಲೇ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತ, ಕಂಡ ಕಂಡ ಹೊಲಕ್ಕೆ ನುಗ್ಗಿ ಹಾಳು ಮಾಡುತ್ತಿದ್ದ. ಆದರೆ, ಈಗ ಬಲೆಗೆ ಬಿದ್ದಿರುವ ಕರ್ಣನ ಮೇಲೆ ರೈತರ ಗುಂಡುಗಳು ಬಿದ್ದಿದ್ದು, ನರಳಾಡುತ್ತಿದ್ದಾನೆ. ಇದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಸುರಿಸುತ್ತಿದ್ದಾರೆ.
ಸದ್ಯ ಕಾಜೂರು ಕರ್ಣ ಕೊಡಗಿನ ದುಬಾರೆ ಸಾಕಾನೆ ಶಿಬಿರ (Dubare Elephant camp)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಮೀನಿಗೆ ನುಗ್ಗುತ್ತಿದ್ದ ಸಂದರ್ಭದಲ್ಲಿ ರೈತರು (Farmers) ಆನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈಗ ಅದು ನೋವಿನಿಂದ ನರಳಾಡುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಭಾಗದಲ್ಲಿ ಜನರಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ (Forest Department) ಒಂದು ತಿಂಗಳ ಹಿಂದೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಈ ಕಾಡಾನೆ (Wild Elephant) ಸೆರೆಗೆ ಒಂದು ವರ್ಷದ ಹಿಂದೆಯೆ ಅನುಮತಿ ದೊರೆತಿತ್ತು. ಆದರೆ, ಅದು ಮಾತ್ರ ಕೈಗೆ ಸಿಕ್ಕಿರಲಿಲ್ಲ. ಎರಡು ಕಾಲಿಗೂ ಗುಂಡೇಟು ಬಿದ್ದಿದ್ದು, ಕಾಲಿನ ಸ್ವಾದಿನವನ್ನೇ ಕರ್ಣ ಕಳೆದುಕೊಂಡು ಒದ್ದಾಡುತ್ತಿದ್ದಾನೆ. ತಿಂಗಳಿನಿಂದ ನಿದ್ರೆಯನ್ನು ಕೂಡ ಸರಿಯಾಗಿ ಮಾಡದೆ ನರಳಾಡುತ್ತಿದ್ದಾನಂತೆ. ಈ ಕಾಡಾನೆ ಪರಿಸ್ಥಿತಿ ಕಂಡು ಅರಣ್ಯ ಇಲಾಖೆ ಅಧಿಕಾರಿಗಳೇ ಕಣ್ಣಿರು ಸುರಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದು, ಗುಂಡಿನ ದಾಳಿ ನಡೆಸುವ ಬದಲು ಪಟಾಕಿ ಸಿಡಿಸಿ, ಸದ್ದು ಮಾಡಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವಂತೆ ಕೋರಿದ್ದಾರೆ.