ನವದೆಹಲಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ನಡೆಯೊಂದು ಕ್ರಿಕೆಟ್ ಕಾರಿಡಾರ್ನಲ್ಲಿ ಜೋರು ಸುದ್ದಿಯಾಗಿದೆ. ಅವರು ನೆಟ್ ಬೌಲರ್ ಜಸ್ಕರಣ್ ಸಿಂಗ್ ತಮ್ಮಹೊಸ ಶೂಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ಲಾಂಗ್ ಆನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಶ್ರೇಯಸ್ ಈ ಅತ್ಯುತ್ತಮ ಕೆಲಸ ಮಾಡಿದರು.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳ ನಿಮಿತ್ತ ಭಾರತ ತಂಡಕ್ಕೆ ನೆಟ್ ಬೌಲರ್ಗಳು ಇದ್ದರು. ಹೀಗಾಗಿ ಭಾರತದ ಬ್ಯಾಟ್ಸ್ಮನ್ಗಳಿಗೆ ಬೌಲ್ ಮಾಡಲು ಜಸ್ಕರಣ್ ಸಿಂಗ್ಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನು ಖುಷಿ ಪಡಿಸಲು ಶ್ರೇಯಸ್ ಅಯ್ಯರ್ ಶೂ ಕೊಟ್ಟಿದ್ದಾರೆ. ಅಂದ ಹಾಗೆ ಜಸ್ಕರಣ್ ಸಿಂಗ್ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್. ಆದರೆ ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.
“ಸಹೋದರ ಹೇಗಿದ್ದೀರಾ? ಎಲ್ಲವೂ ಚೆನ್ನಾಗಿದೆಯಾ?” ಎಂದು ಹೇಳುವ ಮೂಲಕ ಶ್ರೇಯಸ್ ಅಯ್ಯರ್ ನನ್ನ ಬಳಿ ಬಂದು, ʻನಿಮ್ಮ ಶೂ ಗಾತ್ರ ಎಷ್ಟು ಎಂದು ಕೇಳಿದರು. ನಾನು ಅದಕ್ಕೆ 10 ಎಂದು ಹೇಳಿದೆ. ಅವರು ನಿಮಗಾಗಿ ನಾನು ಏನೋ ಒಂದನ್ನು ತಂದಿದ್ದೇನೆ ಎಂದು ಹೇಳಿ ಈ ಸ್ಪೈಕ್ಸ್ ಕೊಟ್ಟರು. ಇದು ನನ್ನ ಪಾಲಿಗೆ ಅತ್ಯಂತ ದೊಡ್ಡದು,” ಎಂದು ಐಸಿಸಿ ನೆಟ್ ಬೌಲರ್ ಆಗಿರುವ ಜಸ್ಕರಣ್ ಸಿಂಗ್ ಹೇಳಿದ್ದಾರೆ.
ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ
ಶ್ರೇಯಸ್ ಅಯ್ಯರ್ ನನಗೆ ಶೂ ನೀಡಿದ್ದ ಕ್ಷಣ ನನ್ನ ಜೀವನದ ಅತ್ಯಂತ ವಿಶೇಷ ಕ್ಷಣವಾಗಿದೆ. ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅತ್ಯಂತ ಪ್ರಮುಖ ಆಟಗಾರ ಎಂದು ಇದೇ ವೇಳೆ ಜಾಸ್ಕಿರಣ್ ಸಿಂಗ್ ತಿಳಿಸಿದ್ದಾರೆ. “ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿಮಿತ್ತ ನಾನು ನೆಟ್ ಬೌಲರ್ ಆಗಿದ್ದೆ. ಇಂದು (ಶುಕ್ರವಾರ) ನನ್ನ ಪಾಲಿಗೆ ಅತ್ಯಂತ ವಿಶೇಷ ಕ್ಷಣವಾಗಿದೆ. ಶ್ರೇಯಸ್ ಅಯ್ಯರ್ ಅವರಿಂದ ಹೊಸ ಸ್ಪೈಕ್ಸ್ ಅನ್ನು ಪಡೆದುಕೊಂಡಿದ್ದೇನೆ,” ಎಂದು ಜಸ್ಕರಣ್ ಸಿಂಗ್ ತಿಳಿಸಿದ್ದಾರೆ.
ಫೀಲ್ಡಿಂಗ್ ಮಾಡಿದ್ದ ಜಸ್ಕರಣ್
“ಈ ಟೂರ್ನಿಯಲ್ಲಿ ನಾನು ಭಾರತ ತಂಡದ ಪರ ಕ್ಷೇತ್ರ ರಕ್ಷಣೆಯನ್ನು ಮಾಡಿದ್ದೇನೆ. ಆದರೆ, ಬೌಲ್ ಮಾಡುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿಗೆ ನೆಟ್ ಬೌಲರ್ ಆಗಿ ಬೌಲ್ ಮಾಡಿದ್ದೇನೆ. ಅದು ನಿಜಕ್ಕೂ ಅದ್ಭುತ ಅನುಭವವಾಗಿದೆ. ಇದೀಗ ಶ್ರೇಯಸ್ ಬಾಯ್ಗೆ ಬೌಲ್ ಮಾಡಿರುವುದು ನನ್ನ ಪಾಲಿಗೆ ದೊಡ್ಡ ಸಂಗತಿ,” ಎಂದು ಜಸ್ಕರಣ್ ಸಂತಸ ವ್ಯಕ್ತಪಡಿಸಿದ್ದಾರೆ.
“ಭಾರತ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳಿಗೂ ಬೌಲ್ ಮಾಡುವುದು ವಿಶೇಷ, ಆದರೆ, ರಿಷಭ್ ಪಂತ್ ಅವರಂತಹ ಎಡಗೈ ಬ್ಯಾಟ್ಸ್ಮನ್ಗೆ ಬೌಲ್ ಮಾಡಲು ಎದುರು ನೋಡುತ್ತಿದ್ದೇನೆ. ಅವರು ಎಡಗೈ ಬ್ಯಾಟ್ಸ್ಮನ್ ಹಾಗೂ ಸ್ವಾಭಾವಿಕವಾಗಿ ಆಂಗಲ್ನಲ್ಲಿ ನಿಲ್ಲುತ್ತಾರೆ. ಚೆಂಡು ಅವರಿಗಿಂತ ಸ್ವಲ್ಪ ದೂರದಲ್ಲಿ ಸಾಗಲಿದೆ. ಈ ಕಾರಣದಿಂದ ನಾನು ಅವರಿಗೆ ಬೌಲ್ ಮಾಡಲು ತುಂಬಾ ಇಷ್ಟಪಡುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
“ಮೊದಲನೇ ಸೆಷನ್ನಿಂದಲೂ ನಾವು ಭಾರತ ತಂಡದ ಜೊತೆ ಇದ್ದೇವೆ. ಇದು ನಮ್ಮದು ನಾಲ್ಕನೇ ಸೆಷನ್. ಶ್ರೇಯಸ್ ಅಯ್ಯರ್ ನಿಜಕ್ಕೂ ಮೋಜಿನಿಂದ ಇರುತ್ತಾರೆ ಹಾಗೂ ಚೆಂಡು ನನ್ನ ಬಳಿ ಬಂದಾಗಲೆಲ್ಲಾ, ಕ್ಯಾಚ್ ಪಡೆಯಿರಿ ಎಂದು ಹುರಿದುಂಬಿಸುತ್ತಿದ್ದರು,” ಎಂದು ಜಸ್ಕರಣ್ ಸಿಂಗ್ ಹೇಳಿದ್ದಾರೆ.