ಶಿವಮೊಗ್ಗ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಬೈಕ್ ಅಪಘಾತದಲ್ಲಿ ಪತಿ (Husband) ಸಾವನ್ನಪ್ಪಿದ ಸುದ್ದಿ ತಿಳಿದು ಪತ್ನಿ (Wife) ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ (Shivamogga) ಹೊಸನಗರ (Hosanagara) ತಾಲೂಕಿನ ಬೆಸಿಗೆ ಗ್ರಾಪಂ ವ್ಯಾಪ್ತಿಯ ಕಿಲ್ಲೆ ಕ್ಯಾತರ ಕ್ಯಾಂಪ್ ನಲ್ಲಿ ನಡೆದಿದೆ.
ಮಂಜುನಾಥ್ (25), ಅಮೃತ (21) ಸಾವನ್ನಪ್ಪಿರುವ ದುರ್ದೈವಿಗಳು. ಮಂಗಳವಾರ ಮಂಜುನಾಥ್ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದರು. ಶಿಕಾರಿಪುರದ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು. ಕೂಡಲೇ ಮಂಜುನಾಥ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಸಾವಿನಿಂದ ಮನನೊಂದ ಪತ್ನಿ ಅಮೃತ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಜುನಾಥ್ ಹಾಗೂ ಅಮೃತ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಹೊಸನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.