ಬೀದರ್: ಬಿಜೆಪಿಯ ರೆಬೆಲ್ ಟೀಮ್ ನಿಂದ ಇಂದಿನಿಂದ ವಕ್ಫ್ ಬೋರ್ಡ್ (Waqf Board) ವಿರುದ್ಧ ಹೋರಾಟ ಆರಂಭವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BJP state president BY Vijayendra) ಅವರು ಮೂರು ತಂಡಗಳನ್ನು ರಚಿಸಿ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಬೀದರ್ ಜಿಲ್ಲೆಯಿಂದ ರೆಬೆಲ್ಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ.
ವಕ್ಫ್ ಹಠಾವೊ ದೇಶ್ ಬಚಾವೋ ಎಂಬ ಘೋಷವಾಕ್ಯದೊಂದಿಗೆ ರೆಬಲ್ ನಾಯಕರು ಹೋರಾಟಕ್ಕೆ ಇಳಿದಿದ್ದಾರೆ. ಹೋರಾಟಕ್ಕೆ ಭಜರಂಗದಳ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ರಕ್ಷಣಾ ಪಡೆ ಸೇರಿ 10ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಕೈ ಜೋಡಿಸಿವೆ. ಹೀಗಾಗಿ ರೆಬೆಲ್ ನಾಯಕರಿಗೆ ಬಲ ಬಂದಂತಾಗಿದೆ.
ಬೀದರ್ ಜಿಲ್ಲೆಯಲ್ಲಿ ಬರೋಬ್ಬರಿ 13,295 ಎಕರೆ ವಕ್ಪ್ ಆಸ್ತಿ ಎಂದು ನಮೂದಾಗಿದೆ. ಈಗಾಗಲೇ ವಕ್ಫ್ ಬೋರ್ಡ್ 217 ಎಕರೆಯನ್ನು ತನ್ನ ಅಧೀನಕ್ಕೆ ಪಡೆದಿದೆ. ಬೀದರ್ನಲ್ಲಿ ಗ್ರಾಮಕ್ಕೆ ಗ್ರಾಮ, ಕೃಷಿ ಭೂಮಿ, ಸ್ಮಾರಕ, ಆಸ್ಪತ್ರೆ, ಮಠ-ಮಂದಿರಗಳ ಮೇಲೂ ವಕ್ಫ್ ಕರಿನೆರಳು ಬಿದ್ದಿದೆ. ಹೀಗಾಗಿ ರೆಬೆಲ್ ತಂಡ ಹೋರಾಟಕ್ಕೆ ಇಳಿದಿದೆ. ಇನ್ನೊಂದೆಡೆ ಬಿಜೆಪಿಯ ನಾಯಕರೂ ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಹಮ್ಮಿಕೊಂಡರೆ, ಯತ್ನಾಳ್ ಟೀಂ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದೆ. ಯತ್ನಾಳ್ ಟೀಂ ಬೀದರ್ ನಿಂದ ಚಾಮರಾಜನಗರದವರೆಗೆ ಹೋರಾಟ ಜಾಥಾ ನಡೆಸಲು ಮುಂದಾಗಿದೆ. ಆದರೆ, ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಹೋರಾಟದಲ್ಲೇ ಈ ರೀತಿ ಗೊಂದಲಗಳಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಯತ್ನಾಳ್ ಟೀಮ್ ನಲ್ಲಿ ಶಾಸಕ ರಮೇಶ ಜಾರಕಿಹೊಳಿ, ಜಿ.ಎಂ. ಸಿದ್ದೇಶ್, ಪ್ರತಾಪ್ ಸಿಂಹ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಗುರುತಿಸಿಕೊಂಡಿದ್ದಾರೆ.


















