ನವ ದೆಹಲಿ : ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಪ್ರಧಾನಿ ಮೋದಿ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಸತತ 12ನೇ ಭಾರಿ ಭಾಷಣ ಮಾಡಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಥೀಮ್ ‘ನಯಾ ಭಾರತ್’ ಆಗಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶವನ್ನು ಮುನ್ನಡೆಸುವ ಗುರಿ ಹೊಂದಲಾಗಿದೆ.
ಪ್ರಧಾನಿ ಮೋದಿಯವರನ್ನು ಹಿರಿಯ ಸರ್ಕಾರ ಮತ್ತು ಸೇನಾ ಅಧಿಕಾರಿಗಳು ಬರಮಾಡಿಕೊಳ್ಳುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ನಂತರ ಧ್ವಜಾರೋಹಣ ನೆರೇರಿಸಿದ ಮೋದಿಯವರು ದೇಶದ ಜನತೆಯನ್ನುದ್ದೇಶಿಸಿ ಸತತ 12ನೇ ಬಾರಿಗೆ ಕೆಂಪುಕೋಟೆಯಲ್ಲಿ ಭಾಷಣ ಮಾಡಿದರು.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನನ್ನ ಪ್ರೀತಿಯ ದೇಶದ ಪ್ರಜೆಗಳೇ ಈ ಸ್ವಾತಂತ್ರ್ಯೋತ್ಸವ 140 ಕೋಟಿ ಜನರ ನಿರ್ಣಯಗಳ ಹಬ್ಬ. ಇದು ಹೆಮ್ಮೆ ಮತ್ತು ಸಂತೋಷದಿಂದ ತುಂಬಿದ ಸಾಮೂಹಿಕ ಸಾಧನೆಗಳ ಕ್ಷಣವಾಗಿದೆ. ರಾಷ್ಟ್ರ ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ನಾಗರಿಕರು ತಿರಂಗದ ಬಣ್ಣಗಳಲ್ಲಿ ಮುಳುಗಿದ್ದಾರೆ. 75 ವರ್ಷಗಳಿಂದ, ಭಾರತದ ಸಂವಿಧಾನ ದೀಪಸ್ತಂಭದಂತೆ ನಮಗೆ ದಾರಿ ತೋರಿಸುತ್ತಿದೆ ಎಂದಿದ್ದಾರೆ.
ಇಂದು ಕೆಂಪು ಕೋಟೆಯಿಂದ ದೇಶಕ್ಕೆ ಮಾರ್ಗದರ್ಶನ ನೀಡುವ ಮತ್ತು ದೇಶಕ್ಕೆ ನಿರ್ದೇಶನ ನೀಡುವ ಸಂವಿಧಾನದ ನಿರ್ಮಾತೃಗಳಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ. ಇಂದು ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125 ನೇ ಜನ್ಮ ದಿನಾಚರಣೆಯನ್ನೂ ಕೂಡ ಆಚರಿಸುತ್ತಿದ್ದೇವೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಭಾರತದ ಸಂವಿಧಾನಕ್ಕಾಗಿ ತ್ಯಾಗ ಮಾಡಿದ ದೇಶದ ಮೊದಲ ಮಹಾನ್ ವ್ಯಕ್ತಿ. ಸಂವಿಧಾನಕ್ಕಾಗಿ ತ್ಯಾಗ ಮಾಡಿದ್ದಾರೆ. 370ನೇ ವಿಧಿಯ ಗೋಡೆಯನ್ನು ಕೆಡವಿ ಒಂದು ದೇಶ, ಒಂದು ಸಂವಿಧಾನದ ಮಂತ್ರವನ್ನು ಜೀವಂತಗೊಳಿಸಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದೇವೆ. ಇಂದು ಕೆಂಪು ಕೋಟೆಯಲ್ಲಿ ಅನೇಕ ವಿಶೇಷ ಗಣ್ಯರು ಇದ್ದಾರೆ. ದೂರದ ಹಳ್ಳಿಗಳ ಪಂಚಾಯತ್ ಸದಸ್ಯರು, ಪ್ರತಿನಿಧಿಗಳು, ಕ್ರೀಡಾ ಕ್ಷೇತ್ರದ ಸಾಧಕರು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳು ಇಲ್ಲಿದ್ದಾರೆ. ಇಂದು, ಕೆಂಪು ಕೋಟೆಯು ತಂತ್ರಜ್ಞಾನದ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಿದೆ ಎಂದು ಸಾರಿ ಹೇಳಿದ್ದಾರೆ.
ಕೆಲವು ದಿನಗಳಲ್ಲಿ, ನಾವು ನೈಸರ್ಗಿಕ ವಿಕೋಪಗಳು, ಭೂಕುಸಿತಗಳು, ಮೇಘ ಸ್ಫೋಟಗಳು ಮತ್ತು ಇತರ ಅನೇಕ ವಿಪತ್ತುಗಳನ್ನು ಎದುರಿಸುತ್ತಿದ್ದೇವೆ. ಸಂತ್ರಸ್ತ ಜನರಿಗೆ ನಮ್ಮ ಸಹಾನುಭೂತಿ ಇದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಪ್ರಯತ್ನಗಳು ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಪೂರ್ಣ ಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂದು, ಕೆಂಪು ಕೋಟೆಯಿಂದ, ಆಪರೇಷನ್ ಸಿಂಧೂರ್ನ ಧೈರ್ಯಶಾಲಿ ಸೈನಿಕರಿಗೆ ನಮನ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 22 ರಂದು, ಗಡಿಯಾಚೆಯಿಂದ ಭಯೋತ್ಪಾದಕರು ಪಹಲ್ಗಾಮ್ ಗೆ ಬಂದು ಅವರ ಧರ್ಮವನ್ನು ಕೇಳಿದ ನಂತರ ಜನರನ್ನು ಕೊಂದರು. ಪಹಲ್ಗಾಮ್ ಹತ್ಯಾಕಾಂಡದಿಂದ ಇಡೀ ವಿಶ್ವವೇ ಆಘಾತಕ್ಕೊಳಗಾಯಿತು. ಆಪರೇಷನ್ ಸಿಂಧೂರ್ ಮೂಲಕ ಆಕ್ರೋಶ ಹೊರಹಾಕಲಾಯಿತು. ಪಾಕಿಸ್ತಾನದಲ್ಲಿ ನಾವು ನಡೆಸಿದ ಆಪರೇಷನ್ ಸಿಂಧೂರ್ ದೊಡ್ಡ ವಿನಾಶವನ್ನೇ ತಂದಿದೆ. ಇದರ ಬಳಿಕ ಪ್ರತೀ ನಿತ್ಯ ಹೊಸ ಬೆಳವಣಿಗೆಗಳು ಕಂಡು ಬರುತ್ತಿವೆ. ಈ ಕೆಂಪು ಕೋಟೆಯಿಂದ, ಆಪರೇಷನ್ ಸಿಂದೂರ್ನ ವೀರರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಗುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ವೀರ ಯೋಧರು ಶತ್ರುವನ್ನು ಅವನ ಕಲ್ಪನೆಗೂ ಮೀರಿ ಶಿಕ್ಷಿಸಿದರು. ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತವನ್ನು ನೀಡಿದ್ದೇವೆ. ದೇಶದ ಮೇಲೆ ಕೆಂಗಣ್ಣು ಬೀರುವವರ ವಿರುದ್ಧ ತಂತ್ರ, ಗುರಿ ಮತ್ತು ಸಮಯವನ್ನು ಸೇನೆಯೇ ನಿರ್ಧರಿಸುತ್ತದೆ. ನಮ್ಮ ಸೇನಾ ಪಡೆಗಳು ಹಲವಾರು ದಶಕಗಳಿಂದ ಎಂದಿಗೂ ಮಾಡದ ಕೆಲಸವನ್ನು ಮಾಡಿದರು. ನಾವು ಶತ್ರುಗಳ ನೆಲಕ್ಕೆ ನೂರಾರು ಕಿಲೋಮೀಟರ್ ಪ್ರವೇಶಿಸಿ ಉಗ್ರರ ನೆಲೆಗಳನ್ನು ನೆಲಸಮಗೊಳಿಸಿದ್ದೇವೆ. ಪಾಕಿಸ್ತಾನದಲ್ಲಿ ಎಷ್ಟು ಮಟ್ಟದಲ್ಲಿ ವಿನಾಶ ಎದುರಾಗಿದೆ ಎಂದರೆ ಪ್ರತಿದಿನ ಹೊಸ ಹೊಸ ಮಾಹಿತಿಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
“ಕೇಸರಿ ಪೇಟದಲ್ಲಿ ಕಂಗೊಳಿಸಿದ ನಮೋ :”
ಸತತ 12ನೇ ಬಾರಿಗೆ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಬಿಳಿ ಕುರ್ತಾ, ಕೇಸರಿ ಬಂದ್ಗಲಾ ಜಾಕೆಟ್ ಮತ್ತು ಕೇಸರಿ ಬಣ್ಣದ ಪೇಟವನ್ನು ಧರಿಸಿದ್ದರು.
ಪ್ರತಿ ವರ್ಷ ಮೋದಿ, ಸ್ವಾತಂತ್ರ್ಯ ದಿನದಂದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪೇಟಗಳನ್ನು ಧರಿಸುತ್ತಾರೆ.
ಕಳೆದ ವರ್ಷ, ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದ ರಾಜಸ್ಥಾನಿ ಲೆಹೆರಿಯಾ ಪೇಟವನ್ನು ಧರಿಸಿದ್ದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತ್ರದ ಸಂಕೇತವಾಗಿದೆ.
2014ರಲ್ಲಿ ಮೊದಲ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಕೆಂಪು ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು.
2023ರಲ್ಲಿ ಬಂಧನಿ ಮುದ್ರಣದ ಪೇಟ, 2022ರಲ್ಲಿ ನೆಹರೂ ಜಾಕೆಟ್ ಮತ್ತು ತ್ರಿವರ್ಣದ ಪೇಟ, 2021ರಲ್ಲಿ ಕೆಂಪು ಮತ್ತು ಗುಲಾಬಿ ಮಿಶ್ರಿತ ಪೇಟ, 2020ರಲ್ಲಿ ಕೇಸರಿ ಮತ್ತು ಕೆನೆ ಬಣ್ಣ ಮಿಶ್ರಿತ ಪೇಟವನ್ನು ಧರಿಸಿದ್ದರು. ಹೀಗೆ ಪ್ರತಿ ವರ್ಷವೂ ವಿಭಿನ್ನ ರೀತಿಯ ಪೇಟ ಧರಿಸಿ ಮೋದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಧ್ವಜಾರೋಹಣ ನೆರವೇರಿಸಿದರು. ಬಳಿಕ, ಸತತ 12ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಣ್ವಸ್ತ್ರ ಬೆದರಿಕೆ ಒಡ್ಡುತ್ತಿರುವ ನೆರೆಯ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.
“ಮೋದಿ ಭಾಷಣದ ಮುಖ್ಯಾಂಶಗಳು ಇಂತಿವೆ”
* ಸಂವಿಧಾನಕ್ಕಾಗಿ ತ್ಯಾಗ ಮಾಡಿದ ಮೊದಲ ಭಾರತೀಯ ಶ್ಯಾಮ ಪ್ರಸಾದ್ ಮುಖರ್ಜಿ
* ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುತ್ತೇನೆ.
* ಆಪರೇಷನ್ ಸಿಂಧೂರದ ವೀರ ಯೋಧರಿಗೆ ನಮನ ಸಲ್ಲಿಸುವ ದಿನವಿದು.
* ಪಹಲ್ಲಾಮ್ ದಾಳಿ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆಪರೇಷನ್ ಸಿಂಧೂರ ದೇಶ ಹಿಂದೆಂದೂ ನೋಡದ ಒಂದು ಕಾರ್ಯಾಚರಣೆಯಾಗಿದೆ.
* ಈ ಕಾರ್ಯಾಚರಣೆ ಮೂಲಕ ಪಾಕ್ನಲ್ಲಿ ಆಗಿರುವ ವಿನಾಶವು ತುಂಬಾ ದೊಡ್ಡದಾಗಿದ್ದು, ಅದರ ಬಗ್ಗೆ ಇನ್ನೂ ಹೊಸ ಹೊಸ ಮಾಹಿತಿ ಬರುತ್ತಿದೆ. ಪಾಕಿಸ್ತಾನದ ಉಗ್ರರ ನೆಲೆಗಳು, 6 ಜೆಟ್ಗಳನ್ನು ಹೊಡೆದುರುಳಿಸಲಾಗಿದೆ.
* ಪರಮಾಣು ಬೆದರಿಕೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ: ಕೆಂಪು ಕೋಟೆಯಿಂದ ಪ್ರಧಾನಿಯವರ ಸ್ಪಷ್ಟ ಸಂದೇಶ
* ನಾವು ಈಗ ಭಯೋತ್ಪಾದಕರು ಮತ್ತು ಭಯೋತ್ಪಾದನಾ ಬೆಂಬಲಿಗರಿಗೆ ಕಡಿವಾಣ ಹಾಕಿದ್ದೇವೆ.
* ಭಯೋತ್ಪಾದಕರು ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಸಿಂಧೂ ನದಿ ಒಪ್ಪಂದ ರದ್ದತಿಗೆ ಕುರಿತು ಮೋದಿ ಹೇಳಿದ್ದಾರೆ.



















