ಡೆಹ್ರಾಡೂನ್: ಉತ್ತರಾಖಂಡದ ಪ್ರಮುಖ ಯಾತ್ರಾಸ್ಥಳ ಕೇದಾರನಾಥ ದೇಗುಲದಿಂದ ಗುಪ್ತಕಾಶಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ವೊಂದು ಭಾನುವಾರ ಅರಣ್ಯದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಅದರಲ್ಲಿದ್ದ ಎಲ್ಲ 7 ಮಂದಿ ಮೃತಪಟ್ಟಿದ್ದಾರೆ. ಆರ್ಯನ್ ಏವಿಯೇಷನ್ ಕಂಪನಿಗೆ ಸೇರಿರುವ ಕಾಪ್ಟರ್ ತನ್ನ 10 ನಿಮಿಷಗಳ ಪ್ರಯಾಣದಲ್ಲಿ ಗೌರಿಕುಂಡ್ ಮತ್ತು ಸೋನ್ ಪ್ರಯಾಗ್ ಮಧ್ಯೆ ಅರಣ್ಯದಲ್ಲಿ ಪತನಗೊಂಡಿದೆ.
ಭಾನುವಾರ ಮುಂಜಾನೆ 5.20ಕ್ಕೆ ಈ ಘಟನೆ ನಡೆದಿದೆ. ಕಾಪ್ಟರ್ನಲ್ಲಿ ಒಟ್ಟು 6 ಯಾತ್ರಿಗಳಿದ್ದರು. ಅವರಲ್ಲಿ 5 ಮಂದಿ ವಯಸ್ಕರು ಹಾಗೂ 23 ತಿಂಗಳ ಮಗುವೂ ಇತ್ತು. ಈ 6 ಮಂದಿ ಹಾಗೂ ಪೈಲಟ್ ಸಜೀವ ದಹನವಾಗಿದ್ದಾರೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.

ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ ಬಳಿಕ ಯಾತ್ರಿಕರು ಹೆಲಿಕಾಪ್ಟರ್ ನಲ್ಲಿ ಗುಪ್ತಕಾಶಿಗೆ ಹೊರಟಿದ್ದರು. ಅದೇ ಸಮಯದಲ್ಲಿ ಹವಾಮಾನ ಪ್ರತಿಕೂಲವಾಗಿ ಪರಿಣಮಿಸಿತ್ತು. ಕಣಿವೆಯಿಂದ ಮೇಲಕ್ಕೆ ಕಾಪ್ಟರ್ ಅನ್ನು ಹಾರಿಸಲು ಪೈಲಟ್ ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅದು ಗೌರಿಕುಂಡ್ ಸಮೀಪ ಅಪ್ಪಳಿಸಿತು. ಕಾಪ್ಟರ್ ನಲ್ಲಿದ್ದವರ ಪೈಕಿ ಒಬ್ಬರು ಬದ್ರಿನಾಥ ಕೇದಾರನಾಥ ದೇಗುಲ ಸಮಿತಿಯ ಉದ್ಯೋಗಿ. ಅವರನ್ನು ಉಖೀಮಠದ ವಿಕ್ರಂ ರಾವತ್ ಎಂದು ಗುರುತಿಸಲಾಗಿದೆ.
ಇವರಲ್ಲದೇ, ಮಹಾರಾಷ್ಟ್ರದ ಯಾವತ್ಮಾಲ್ನ ಜೈಸ್ವಾಲ್ ಕುಟುಂಬದ ಸದಸ್ಯರಾದ ರಾಜ್ ಕುಮಾರ್ ಸುರೇಶ್ ಜೈಸ್ವಾಲ್, ಶ್ರದ್ಧಾ ಜೈಸ್ವಾಲ್ ಮತ್ತು ಅವರ 23 ತಿಂಗಳ ಮಗಳು ಕಾಶಿ ರಾಜ್ ಕುಮಾರ್ ಜೈಸ್ವಾಲ್ ಕೂಡ ದುರಂತಕ್ಕೆ ಬಲಿಯಾಗಿದ್ದಾರೆ. ಜೈಸ್ವಾಲ್ ದಂಪತಿಯ ಪುತ್ರ ವಿವಾನ್ ತನ್ನ ಅಜ್ಜನೊಂದಿಗೆ ಉಳಿದಿದ್ದ ಕಾರಣ ಆತ ಬದುಕುಳಿದಿದ್ದಾನೆ. ಇನ್ನು, ಉತ್ತರಪ್ರದೇಶದವರಾದ 66 ವರ್ಷದ ವಿನೋದ್ ದೇವಿ ಮತ್ತು 19 ವರ್ಷದ ತೃಷ್ಟಿ ಸಿಂಗ್ ಕೂಡ ಮೃತಪಟ್ಟಿದ್ದಾರೆ. ಮೃತ ಪೈಲಟ್ 39 ವರ್ಷದ ಕ್ಯಾಪ್ಟನ್ ರಾಜ್ ಬೀರ್ ಸಿಂಗ್ ಚೌಹಾಣ್ ಅವರು ಜೈಪುರ ನಿವಾಸಿಯಾಗಿದ್ದಾರೆ.
ಎಲ್ಲ ದೇಹಗಳೂ ಸುಟ್ಟು ಕರಕಲಾಗಿರುವ ಕಾರಣ ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಿದ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಏರಿಂಡಿಯಾ ವಿಮಾನ ದುರಂತವು 270ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಘಟನೆ ಮಾಸುವ ಮುನ್ನವೇ ಈ ಅವಘಡ ನಡೆದಿದೆ.