ಮುಂಬೈ: ಮುಂಬೈನ ಜೀವನಾಡಿಯಾಗಿರುವ ರೈಲುಗಳಲ್ಲಿ ಜನರು ತುಂಬಿ ತುಳುಕುವುದು ಸರ್ವೇ ಸಾಮಾನ್ಯ ಸಂಗತಿ. ಅಲ್ಲಿ ಇಂಥದ್ದೊಂದು ದೃಶ್ಯ ಕಾಣದಿರುವ ರೈಲುಗಳನ್ನು ನೋಡಲು ಸಾಧ್ಯವೇ ಇಲ್ಲ. ಕಚೇರಿಗಳು, ಕೆಲಸಕ್ಕೆ ಹೋಗುವ ಧಾವಂತದಲ್ಲಿ ಎಲ್ಲಿ ಸಾಧ್ಯವೋ ಅಲ್ಲಿಂದ ರೈಲಿನೊಳಗೆ ನುಗ್ಗಿ, ಬಾಗಿಲಲ್ಲಿ ನೇತಾಡಿಕೊಂಡು ಹೋಗುತ್ತಿರುತ್ತಾರೆ. ಇಂಥ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದ ರೈಲೊಂದರಲ್ಲಿ ಸೋಮವಾರ ದುರಂತ ಸಂಭವಿಸಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ಟರ್ಮಿನಸ್ನಿಂದ ಥಾಣೆಯ ಕಸಾರಾಗೆ ತೆರಳುತ್ತಿದ್ದ ಲೋಕಲ್ ರೈಲಿನಿಂದ ಕೆಳಗೆ ಬಿದ್ದು ಐವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಮೂಲಗಳ ಪ್ರಕಾರ, ಸುಮಾರು 10ರಿಂದ 12 ಪ್ರಯಾಣಿಕರು ರೈಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಥಾಣೆ ಜಿಲ್ಲೆಯ ಮುಂಬ್ರಾ ಸ್ಟೇಷನ್ ಸಮೀಪದಲ್ಲೇ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲಿನೊಳಗೆ ಇದ್ದ ವಿಪರೀತ ಜನದಟ್ಟಣೆಯೇ ಈ ದುರ್ಘಟನೆಗೆ ಕಾರಣ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಒಳಗೆ ವಿಪರೀತ ನೂಕುನುಗ್ಗಲು ಇದ್ದುದರಿಂದ ಅನೇಕ ಪ್ರಯಾಣಿಕರು ಬಾಗಿಲಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿದ್ದರು. ರೈಲು ಸಂಚರಿಸುತ್ತಿರುವಾಗಲೇ ಕೆಲವು ಪ್ರಯಾಣಿಕರು ಹಳಿ ಮೇಲೆ ಬಿದ್ದಿದ್ದಾರೆ, ಈ ಪೈಕಿ 5 ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭವಾಗಿದೆ.
ಘಟನೆಯ ಬೆನ್ನಲ್ಲೇ, ಮುಂಬೈನ ಉಪನಗರದಲ್ಲಿನ ಎಲ್ಲ ರೈಲುಗಳಿಗೂ ಆಟೋಮ್ಯಾಟಿಕ್ ಬಾಗಿಲು ಹಾಕುವ ಸೌಲಭ್ಯವನ್ನು ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಅಲ್ಲದೇ, ಸೇವೆಯಲ್ಲಿರುವ ಎಲ್ಲ ರೇಕುಗಳನ್ನೂ ಮರು ವಿನ್ಯಾಸಗೊಳಿಸಲೂ ನಿರ್ಧರಿಸಲಾಗಿದೆ.
ಇಂದು ನಡೆದ ದುರ್ಘಟನೆಯಲ್ಲಿ ಕೆಲವು ಪ್ರಯಾಣಿಕರು ಮೃತಪಟ್ಟಿರುವ ವಿಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ದೃಢಪಡಿಸಿದ್ದು, ಸಾವಿನ ನಿಖರ ಸಂಖ್ಯೆ ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ಇದೊಂದು ದುರದೃಷ್ಟಕರ ಘಟನೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ. ಗಾಯಾಳುಗಳ ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.