ಭಾರತದ ಪ್ರತೀಕಾರದ ಕಾಡ್ಗಿಚ್ಚು ನಿನ್ನೆ ಉಗ್ರವಾದವನ್ನು ಸುಟ್ಟು ಭಸ್ಮ ಮಾಡಿದೆ. ಪಹಲ್ಗಾಮ್ ಹತ್ಯಾಕಾಂಡದ ರುವಾರಿಗಳ ರಣಬೇಟೆಗಿಳಿದ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ದೀಪಾವಳಿ ಆಚರಿಸಿವೆ. ನಿಜಕ್ಕೂ ಸಮಸ್ತ ಭಾರತದ ಪಾಲಿಗೆ ನಿನ್ನೆ ದೀಪಗಳ ಹಬ್ಬ ದೀಪಾವಳಿಯೇ ಸರಿ. ಮನೆಗೆ ನುಗ್ಗಿ ಒಬ್ಬೊಬ್ಬರನ್ನು ಚೆಂಡಾಡಿದ ಭಾರತೀಯ ಸೇನೆಯ ಪರಿ ಅಭಿನಂದನೀಯ. ನಿನ್ನೆ ಒಂದೇ ರಾತ್ರಿ ಅತ್ಯುಗ್ರರ 9 ಠಿಕಾಣಿಗಳನ್ನು ಸರ್ವನಾಶ ಮಾಡಲಾಗಿದೆ.
ಮಧ್ಯರಾತ್ರಿ 1.30ರಿಂದ 2 ಗಂಟೆಯೊಳಗೆ ರಣಬೇಟೆ
ಭಾರತದ ಮೂರು ಸೇನೆಗಳು ನಿನ್ನೆ ರಣೋತ್ಸಾಹದಲ್ಲಿದ್ದವು. 26 ಅಮಾಯಕರ ಹತ್ಯೆ ಮಾಡಿದವರ ಉಸಿರು ನಿಲ್ಲಿಸಿ ಹಗೆ ತೀರಿಸಿಕೊಳ್ಳುವಂಥಾ ಧಾವಂತ ಯೋಧರಲ್ಲಿ ಆವರಿಸಿತ್ತು. ನಿಗದಿಯಂತೆ ನಡುರಾತ್ರಿ 1.30ರ ಕಾರ್ಗತ್ತಲಲ್ಲಿ ನಭಕ್ಕೆ ಜಿಗಿದ ಭಾರತೀಯ ಯುದ್ಧ ವಿಮಾನಗಳು ಬಾನಲ್ಲಿ ರಕ್ತದೋಕುಳಿಯನ್ನೇ ಆಡಿವೆ. ಲಷ್ಕರ್, ಜೈಶ್ ಸೇರಿ ಹಿಜ್ಬುಲ್ ಮುಜಾಹಿದ್ದೀನ್ ನ 9 ಕೇಂದ್ರ ಕಚೇರಿಗಳನ್ನು ಇನ್ನಿಲ್ಲದಂತಾಗಿಸಿದೆ. ಕೇವಲ 30 ನಿಮಿಷಗಳ ರಣರೋಚಕ ಆಪರೇಷನ್ ಸಿಂಧೂರ್ ಜಿಹಾದಿಗಳನ್ನು ರಕ್ತದ ಮಡುವಿಗೆ ನೂಕಿದೆ.
ಒಂಭತ್ತು ತಾಣ, 100 ಧರ್ಮಾಂಧರು ಫಿನಿಷ್
ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ ಒಟ್ಟು ಒಂಬತ್ತು ತಾಣಗಳನ್ನು ಕಳೆದ ರಾತ್ರಿ ಗುರಿಯಾಗಿಸಲಾಗಿದೆ. ಈ ಪೈಕಿ ಪಾಕಿಸ್ಥಾನದ 4 ಹಾಗೂ ಪಾಕ್ ಆಕ್ರಮಿಕ ಕಾಶ್ಮೀರದ 5 ತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಭವಾಲ್ಪುರದ ಜೈಶ್ ಸಂಘಟನೆ ಕೇಂದ್ರ ಕಚೇರಿ ಮರ್ಕಜ್ ಸುಭಾನ್ ಅಲ್ಹಾ ವನ್ನು ಚಿಂದಿ ಉಡಾಯಿಸಲಾಗಿದೆ. ಇನ್ನು ಮುರ್ಡಿಕ್ ನಲ್ಲಿರುವ ಲಷ್ಕರ್ ಎ ತೋಯ್ಬಾದ ಮರ್ಕಝ್ ತೈಬಾ ಮಸೀದಿ ನೆಲಸಮವಾಗಿದೆ. ಜೈಶ್ ಸಂಘಟನೆಯ ತೆರ್ಹಾ ಕಲನ್ ನಲ್ಲಿದ್ದ ಸರ್ಜಾಲ್ ಮಸೀದಿ, ಸಿಯಾಲ್ ಕೋಟ್ ನ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೆಹ್ಮೂನಾ ಜೋಯಾ, ಬರ್ನಾಲಾದ ಲಷ್ಕರ್ ತರಬೇತಿ ಕೇಂದ್ರ ಮರ್ಕಝ್ ಅಹ್ಲೆ ಹದಿಥ್, ಕೋಟ್ಲಿಯ ಜೈಶ್ ನ ಮರ್ಕಜ್ ಅಬ್ಬಾಸ್, ಜೊತೆ ಕೋಟ್ಲಿಯ ಹಿಜ್ಬುಲ್ ಸಂಘಟನೆಯ ಮಸ್ಕರ್ ರಹೀಲ್ ಸಾಯಿದ್, ಲಷ್ಕರ್ ಎ ತೋಯ್ಬಾದ ಮುಜಫರಾಬಾದ್ ನ ಶ್ವವಾಯಿ ನಾಲ್ಲಾ ಕ್ಯಾಂಪ್ ಹಾಗೂ ಮುಜಫರಾಬಾದ್ ನ ಜೈಶ್ ಎ ಮೊಹಮದ್ ನ ಸೈಯದ್ನಾ ಬಿಲಾಲ್ ಕ್ಯಾಂಪ್ ಕೂಡಾ ಉಡೀಸ್ ಆಗಿದೆ.
ಉಗ್ರ ಮಸೂದ್ ಕುಟುಂಬದ 14 ಮಂದಿ ಬಲಿ
ನಿನ್ನೆಯ ದಾಳಿಯಲ್ಲಿ 2009ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಅಜ್ಮಲ್ ಕಸಬ್ ಮತ್ತು ಹೆಡ್ಲಿ ತರಬೇತಿ ಪಡೆದ ಪ್ರದೇಶವನ್ನೂ ಧ್ವಂಸಗೊಳಿಸಲಾಗಿದೆ. ಅಷ್ಟೇ ಅಲ್ಲಾ, ಭಾರತದ ಆಪರೇಷನ್ ಸಿಂಧೂರಕ್ಕೆ ಜೈಶ್ ಎ ಮೊಹಮದ್ ಸಂಘಟನೆಯ ಹರಿಕಾರ ಮಸೂದ್ ಅಜರ್ ನ ಕುಟುಂಬ ಸರ್ವನಾಶವಾಗಿದೆ. ಮರ್ಕಜ್ ಸುಭಾನ್ ಅಲ್ಹಾ ಮಸೀದಿ ಮೇಲೆ ನಡೆದ ದಾಳಿಯಲ್ಲಿ ಮಸೂದ್ ನ ಸಹೋದರ, ಸಹೋದರಿ ಸೇರಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಉಗ್ರವಾದವನ್ನು ಸಹಿಸೋ ಪ್ರಶ್ನೆಯೇ ಇಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ಭಾರತ ಘಂಟಾಘೋಷವಾಗಿ ಘೋಷಿಸಿದೆ.