ಮುಂಬೈ : ಪುಣೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಸ್ಲಾಂ ಶಬ್ಬೀರ್ ಶೇಖ್ ಅಲಿಯಾಸ್ ಬಂಟಿ ಜಹಗೀರ್ದಾರ್ನನ್ನು (52) ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಮಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶ್ರೀರಾಮಪುರದ ನಿವಾಸಿ ಜಹಗೀರ್ದಾರ್ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೊರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ಮರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಜಹಗೀರ್ದಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಜಹಗೀರ್ದಾರ್ ಕುಖ್ಯಾತ ಅಪರಾಧಿಯಾಗಿದ್ದು ಅಕ್ರಮ ಮರಳು ವ್ಯವಹಾರ, ಸುಲಿಗೆ, ಕೊಲೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದಂತೆ 18 ಕೇಸ್ಗಳು ದಾಖಲಾಗಿವೆ. ಆತನನ್ನು ಪೊಲೀಸರು ಜಿಲ್ಲೆಯಿಂದಲೇ ಗಡಿಪಾರು ಮಾಡಿದ್ದರು. ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹೊರತಾಗಿಯೂ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಅಡಿ 2006 ರಲ್ಲಿ ನಾಸಿಕ್ನಲ್ಲಿ ಜಹಗೀರ್ದಾರ್ನನ್ನು ರಹಸ್ಯ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.
ಪುಣೆಯ ಬಾಂಬ್ ಸ್ಫೋಟ ಹಿನ್ನೆಲೆ |
ಆಗಸ್ಟ್ 1, 2012 ರಂದು ಪುಣೆಯ ಜೆಎಂ ರಸ್ತೆಯಲ್ಲಿ ನಡೆದ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಅಡಿ ಜಹಗೀರ್ದಾರ್ನನ್ನು ಜನವರಿ 2013 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ATS) ಬಂಧಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ರಿಯಾಜ್ ಭಟ್ಕಳ್ ಸೂಚನೆಯ ಮೇರೆಗೆ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದೆ ಎಂದು ಎಟಿಎಸ್ ತನಿಖೆಯಿಂದ ತಿಳಿದುಬಂದಿತ್ತು. ಜೆ.ಎಂ. ರಸ್ತೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಇತರ ಆರೋಪಿಗಳು ಜಹಗೀರ್ದಾರ್ನಿಂದ ಮೂರು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಖರೀದಿಸಿದ್ದಾರೆ ಎಂದು ಎಟಿಎಸ್ ಆರೋಪಿಸಿತ್ತು.
ಇದನ್ನೂ ಓದಿ : ಬೆಂಗಳೂರು ಸಿಟಿ ವಿವಿಯ ಪ್ರಶ್ನೆ ಪತ್ರಿಕೆ ಲೀಕ್ | ಪರೀಕ್ಷೆಗೂ ಮೊದಲೇ ವಾಟ್ಸಾಪ್ನಲ್ಲಿ ಹರಿದಾಡಿತು ಆನ್ಸರ್!



















