ಬೆಂಗಳೂರು : ಉದ್ಯಮಿ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನದ ಪ್ರಕರಣದ ಆರೋಪಿಗಳಿಗಾಗಿ ಮಾರತ್ ಹಳ್ಳಿ ಠಾಣೆ ಪೊಲೀಸರ ತಲಾಶ್ ಮುಂದುವರೆದಿದೆ. ಆರೋಪಿ ನೇಪಾಳಿ ದಂಪತಿ ದಿನೇಶ್, ಕಮಲ ಅಥವಾ ಸಲೀನಾ ಎಂಬ ನಕಲಿ ಹೆಸರುಗಳನ್ನು ಬಳಸಿಕೊಂಡು ಮನೆ ಕೆಲಸಕ್ಕೆ ಸೇರಿ ದೇಶದ ವಿವಿಧೆಡೆ ಇದೇ ಮಾದರಿಯ ಕೃತ್ಯ ಎಸಗಿರುವುದು ತನಿಖೆಯಿಂದ ಸ್ಫೋಟಕ ಅಂಶಗಳು ಬಯಲಾಗಿದೆ.

2025ರ ಅಕ್ಟೋಬರ್ನಲ್ಲಿ ಮಹಾರಾಷ್ಟ್ರದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಲ್ಲದೇ ಪುಣೆಯ ಭಾವ್ಧಾನ್ ಪ್ರದೇಶದ ವಿಂಡ್ಮಿಲ್ ಸೊಸೈಟಿಯಲ್ಲಿರುವ ರತ್ನಾದೀಪ್ ರಂಗನಾಥ್ ರಾವ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿ ಸುಮಾರು ಆರು ತಿಂಗಳ ಬಳಿಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಾಕರ್ ಒಡೆದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ನಂತರ ದಿನೇಶ್ ಹಾಗೂ ಕಮಲ ಎಂಬ ಹೆಸರಿನಲ್ಲಿ ಮನೆ ಕೆಲಸಕ್ಕೆ ಸೇರಿ ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆಂದು ತನಿಖೆಯಿಂದ ಬಯಲಾಗಿದೆ. ಆರೋಪಿಗಳ ಪತ್ತೆಗಾಗಿ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮುಂಬೈ, ಕೊಲ್ಕತ್ತಾ ಹಾಗೂ ನೇಪಾಳ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜೊತೆಗೆ ಸ್ಥಳೀಯವಾಗಿ ಯಾರಾದರೂ ಆರೋಪಿಗಳಿಗೆ ಸಹಾಯ ಮಾಡಿದ್ದಾರೆಯೇ ಎಂಬುದರ ಕುರಿತಾದ ತನಿಖೆಯೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ಯ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ದಿನೇಶ್ (32) ಹಾಗೂ ಕಮಲಾ (25) ದಂಪತಿ ಪರಾರಿಯಾಗಿದ್ದರು. ಜನವರಿ 25ರಂದು ಹಾಡಹಗಲೇ ಮಾರತ್ ಹಳ್ಳಿಯ ಯಮಲೂರಿನಲ್ಲಿರುವ ಉದ್ಯಮಿ ಶಿವಕುಮಾರ್ ಎಂಬುವವರ ಮನೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಶಿವಕುಮಾರ್ ಅವರ ಪುತ್ರ ಶಿಮಂತ್ ಎಸ್ ಅರ್ಜುನ್ ಅವರು ನೀಡಿದ ದೂರಿನನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊಸಬರನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆ, ಮೂಲ ವಿಳಾಸ ಮತ್ತಿತರ ವಿವರಗಳನ್ನು ವಿಚಾರಿಸಿರಬೇಕು. ಸಾಧ್ಯವಾದರೆ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಬೇಕು. ಮನೆಯಲ್ಲಿರದ ಸಂದರ್ಭದಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಗಸ್ತು ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಸಿ.ಜೆ ರಾಯ್ ನಿಗೂಢ ಸಾವು | ಐಟಿ ದಾಳಿ ವೇಳೆ ಭದ್ರತಾ ಲೋಪ ಆರೋಪ – ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ಆಗ್ರಹ!



















