ವಿಮಾನ ದುರಂತ ನಡೆದ ಘಟನಾ ಸ್ಥಳದ ಪಕ್ಕದಲ್ಲಿದ್ದ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ, ಬೆಂಕಿಯ ತೀವ್ರತೆಗೆ ಸಿಲುಕಿ ಸಾವನ್ನಪ್ಪಿದ್ದಾನೆ.
14 ವರ್ಷದ ಆಕಾಶ್ ಸಾವನ್ನಪ್ಪಿರುವ ಬಾಲಕ. ಬಿಜೆ ಹಾಸ್ಟೆಲ್ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿತ್ತು. ಈ ವೇಳೆ ಆಕಾಶ್ ತಾಯಿಗೆ ತಿಂಡಿ ಕೊಡಲು ಮಗ ಅಂಗಡಿ ಬಳಿ ಹೋಗಿದ್ದ. ಅದೇ ಸಮಯಕ್ಕೆ ವಿಮಾನ ದುರಂತ ಸಂಭವಿಸಿದೆ. ಆ ವೇಳೆ ಆಕಾಶ್ ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲೆಗೆ ಆಕಾಶ್ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.
ನನ್ನ ತಮ್ಮ ಆಕಾಶ್ ಬೆಂಕಿಯ ಕೆನ್ನಾಲೆಗೆ ಸಿಲುಕಿದ್ದ. ಆತನನ್ನು ರಕ್ಷಿಸಲು ಯಾರೂ ಇರಲಿಲ್ಲ ಎಂದು ಆತನ ಸಹೋದರ ಕಣ್ಣೀರು ಸುರಿಸಿದ್ದಾನೆ. ಈ ಘಟನೆಯಲ್ಲಿ ತಾಯಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಗ ಸಾವನ್ನಪ್ಪಿರುವ ಸಂಗತಿ ತಾಯಿಗೆ ಇನ್ನೂ ಗೊತ್ತಾಗಿಲ್ಲ. ಮಗನ ಬಗ್ಗೆ ಕೇಳಿದ ತಾಯಿಗೆ, ಕುಟುಂಬಸ್ಥರು ಸುಳ್ಳು ಹೇಳಿದ್ದಾರೆ. ಆದರೆ, ತಾಯಿ ಮಾತ್ರ ಮಗನ ಮುಖ ನೋಡಬೇಕು ಎಂದು ಪಟ್ಟು ಹಿಡಿದಿದ್ದಾರೆ.