ನವದೆಹಲಿ: ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಿ ವಾಪಸ್ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಮರಳಿ ಹಾಯಾಗಿ ತಿಂದು ತೇಗಿ ಮಲಗುತ್ತಿದ್ದ ಉಗ್ರರನ್ನು ಹಾಗೂ ಅವರ ನೆಲೆಗಳನ್ನು ಇತ್ತೀಚೆಗೆ ಭಾರತೀಯ ಸೇನೆಯು ಆಪರೇಷನ್ ಸಿಂದೂರದ ಮೂಲಕ ಸದೆಬಡಿದಿದೆ. ಈ ಕಾರ್ಯಾಚರಣೆಯಲ್ಲಿ ಭಾರತದ ಹೆಮ್ಮೆಯ ಇಸ್ರೋ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಈ ವಿಚಾರವನ್ನು ಸ್ವತಃ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ವಿ. ನಾರಾಯಣನ್ ಅವರೇ ಹೇಳಿಕೊಂಡಿದ್ದಾರೆ.
ದೇಶದ ಭದ್ರತೆಯನ್ನು ಖಾತರಿಪಡಿಸಲು ದಿನದ 24 ಗಂಟೆಗಳ ಕಾಲ 10 ಉಪಗ್ರಹಗಳು ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸುತ್ತಿವೆ ಎಂದು ನಾರಾಯಣನ್ ಇಂಫಾಲ್ನ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (CAU) 5ನೇ ಘಟಿಕೋತ್ಸವ ಸಮಾರಂಭದಲ್ಲಿ ಹೇಳಿದ್ದಾರೆ. ಈ ಉಪಗ್ರಹಗಳು ದೇಶದ 7,000 ಕಿಮೀ ದೀರ್ಘವಾದ ಕರಾವಳಿ ತೀರದಿಂದ ಹಿಡಿದು ಉತ್ತರದ ಗಡಿಭಾಗದವರೆಗೆ ನಿರಂತರವಾಗಿ ನಿಗಾ ಇಡುತ್ತಿವೆ ಎಂದು ಅವರು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಇಸ್ರೋದ ಪಾತ್ರ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬೆನ್ನಲ್ಲೇ ಇಸ್ರೋ ಅಧ್ಯಕ್ಷರಿಂದ ಈ ಹೇಳಿಕೆ ಹೊರಬಿದ್ದಿದೆ. ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7 ರಂದು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇದರಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) 9 ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು. ಈ ಸಂದರ್ಭದಲ್ಲಿ, ಇಸ್ರೋದ ಉಪಗ್ರಹಗಳು ಗಡಿಯಾಚೆಗಿನ ಚಲನವಲನಗಳನ್ನು ಗಮನಿಸುವಲ್ಲಿ ಮತ್ತು ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಗೆ ನೈಜ-ಸಮಯದ ಸಮನ್ವಯವನ್ನು ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಪಾಕ್ ಸೇನೆಯ ಪ್ರಮುಖ ಘಟಕಗಳು, ಉಗ್ರರ ನೆಲೆಗಳು ಮತ್ತು ಲಾಂಚ್ ಪ್ಯಾಡ್ ಗಳ ಬಗ್ಗೆ ಭಾರತೀಯ ಸೇನೆಗೆ ಇಸ್ರೋ ನಿಖರ ಮಾಹಿತಿಯನ್ನು ಒದಗಿಸಿತ್ತು. ದಾಳಿಗೂ ಮೊದಲು ಮತ್ತು ನಂತರದಲ್ಲಿ ಸತತವಾಗಿ ಪಾಕಿಸ್ತಾನದ ನಡೆಗಳ ಮೇಲೆ ನಿಗಾ ವಹಿಸಿ, ನಿರಂತರವಾಗಿ ಸೇನೆಗೆ ಪ್ರತಿ ಕ್ಷಣದ ಮಾಹಿತಿಯನ್ನೂ ರವಾನಿಸುತ್ತಿತ್ತು.

“ನಮ್ಮ ನೆರೆಯ ರಾಷ್ಟ್ರಗಳ ಬಗ್ಗೆ ನಿಮಗೆಲ್ಲ ತಿಳಿದಿದೆ. ದೇಶದ ಭದ್ರತೆಯನ್ನು ಖಾತರಿಪಡಿಸಲು ಉಪಗ್ರಹಗಳ ಮೂಲಕ ಸೇವೆ ಸಲ್ಲಿಸಬೇಕಾಗಿದೆ. ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ ನಾವು ಈ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ,” ಎಂದು ನಾರಾಯಣನ್ ತಿಳಿಸಿದ್ದಾರೆ. ಈ ಉಪಗ್ರಹಗಳು ಭಾರತದ ಸುರಕ್ಷತೆಗಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರ ಈ ಹೇಳಿಕೆಯು ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಶಕ್ತಿಯನ್ನು ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದೆ.
ಇಸ್ರೋದ ಇತರ ಯೋಜನೆಗಳು
ಭದ್ರತೆಯ ಜೊತೆಗೆ, ಇಸ್ರೋ ವಿವಿಧ ಕ್ಷೇತ್ರಗಳಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಇಸ್ರೋ ಉಪಗ್ರಹಗಳು ಕೃಷಿ, ದೂರಶಿಕ್ಷಣ, ವೈದ್ಯಕೀಯ, ದೂರದರ್ಶನ ಪ್ರಸಾರ, ಹವಾಮಾನ ಮುನ್ಸೂಚನೆ, ಪರಿಸರ, ಆಹಾರ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಿವೆ. ವಿಪತ್ತು ನಿರ್ವಹಣೆಯಲ್ಲಿ ಈ ಉಪಗ್ರಹಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹಿಂದೆಲ್ಲ ಪ್ರಾಕೃತಿಕ ವಿಕೋಪಗಳಿಗೆ ಸಾವಿರಾರು ಜನರು ಬಲಿಯಾಗುತ್ತಿದ್ದರು. ಆದರೆ ಈಗ ಉಪಗ್ರಹಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದಾಗಿ ಇಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ.
ಇದಲ್ಲದೆ, ಇಸ್ರೋ ಜಿ20 ರಾಷ್ಟ್ರಗಳಿಗಾಗಿ ಹವಾಮಾನ ಮತ್ತು ವಾಯು ಮಾಲಿನ್ಯವನ್ನು ಅಧ್ಯಯನ ಮಾಡಲು ಒಂದು ಉಪಗ್ರಹವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಜೊತೆಗೆ, ಮೇ 18, 2025 ರಂದು ಪಿಎಸ್ಎಲ್ವಿ-ಸಿ61 ರಾಕೆಟ್ನಿಂದ ಇಒಎಸ್-09 (ರಿಸ್ಯಾಟ್-1ಬಿ) ರಾಡಾರ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆಗೊಳಿಸಲು ಇಸ್ರೋ ಸಿದ್ಧತೆ ನಡೆಸುತ್ತಿದೆ. ಈ ಉಪಗ್ರಹವು ದೇಶದ ಸೂಕ್ಷ್ಮ ಗಡಿಗಳಲ್ಲಿ ಗಸ್ತು ಶಕ್ತಿಯನ್ನು ಮತ್ತಷ್ಟು ವೃದ್ಧಿಸಲಿದೆ.
ಭಾರತದ ಪ್ರಗತಿಯ ಬಗ್ಗೆ ಉಲ್ಲೇಖ
ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ನಾರಾಯಣನ್ ಅವರು ಭಾರತದ ಒಟ್ಟಾರೆ ಪ್ರಗತಿಯ ಬಗ್ಗೆಯೂ ಮಾತನಾಡಿದರು. 1950 ಮತ್ತು 1960ರ ದಶಕಗಳಲ್ಲಿ ಭಾರತವು 54 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಉತ್ಪಾದಿಸುತ್ತಿತ್ತು ಮತ್ತು ಆಹಾರವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ದೇಶವು 250 ಮಿಲಿಯನ್ ಟನ್ಗಿಂತಲೂ ಹೆಚ್ಚು ಆಹಾರವನ್ನು ಉತ್ಪಾದಿಸುತ್ತಿದ್ದು, ಅನೇಕ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ವಿದ್ಯುತ್ ಉತ್ಪಾದನೆ ಮತ್ತು ಹಾಲಿನ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಭತ್ತ, ಗೋಧಿ, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳು, ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ಭಾರತವು ವಿಶ್ವದ ಟಾಪ್ ಐದು ರಾಷ್ಟ್ರಗಳ ಪೈಕಿ ಒಂದಾಗಿದೆ ಎಂದರು.
ಇದೇ ವೇಳೆ, ಈಶಾನ್ಯ ರಾಜ್ಯಗಳ ಒಟ್ಟು 800 ವಿಜ್ಞಾನ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ನಾರಾಯಣನ್ ಘೋಷಿಸಿದರು, ಇದು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತು ಕುತೂಹಲವನ್ನು ಹುಟ್ಟುಹಾಕಲಿದೆ ಎಂದರು.
ವಿದ್ಯಾರ್ಥಿಗಳಿಗೂ ಇಂದೇ ಸಂದರ್ಭದಲ್ಲಿ ಕಿವಿಮಾತು ಹೇಳಿದ ಅವರು, “ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್ ಕೆಲಸಕ್ಕೆ ಬದಲಿಯಿಲ್ಲ. ಸಂಪೂರ್ಣ ಬದ್ಧತೆ, ಸ್ವಯಂ-ಪ್ರೇರಣೆ, ಮತ್ತು ಉತ್ತಮ ಮಾನವೀಯ ಗುಣಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು,” ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಇಸ್ರೋದ ಯೋಜನೆಗಳು
ಇಸ್ರೋದ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ನಾರಾಯಣನ್, ಮುಂದಿನ ಮೂರು ವರ್ಷಗಳಲ್ಲಿ 100-150 ಉಪಗ್ರಹಗಳನ್ನು ಉಡಾವಣೆಗೊಳಿಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ತಿಳಿಸಿದರು. ಇದರಿಂದ ಗಡಿ ಭದ್ರತೆ ಮತ್ತು ಕರಾವಳಿ ಗಸ್ತು ಇನ್ನಷ್ಟು ಬಲವಾಗಲಿದೆ. ಇದಕ್ಕಾಗಿ ಖಾಸಗಿ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಉತ್ತೇಜಿಸಲಾಗುತ್ತಿದೆ, ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸಲಿದೆ ಎಂದರು.