ಮುಂಬೈ: ಮಹಾರಾಷ್ಟ್ರದ ಜಲಂಗಾವ್ನಲ್ಲಿ ಭೀಕರ ರೈಲು ಅವಘಡ (train accident) ನಡೆದಿದ್ದು10 ಮಂದಿ ಧಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಡೆಲ್ಲಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ (Karnataka Express) ರೈಲಿನಡಿಗೆ ಅವರೆಲ್ಲರೂ ಬಿದ್ದಿದ್ದಾರೆ ಎಂಬುದಾಗಿ ವರದಿಯಾಗಿದೆ. ಪ್ರಯಾಣಿಕರೆಲ್ಲರೂ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು.
ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಿಂದ ಪ್ರಯಾಣಿಕರು ಏಕಾಏಕಿ ಜಿಗಿದ ವೇಳೆ ಎದುರಿನಿಂದ ಬರುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ. ಜಲ್ಗಾಂವ್ ಮತ್ತು ಪಚೋರಾ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಪುಷ್ಪಕ್ ಎಕ್ಸ್ಪ್ರೆಸ್(Pushpak Express) ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಮೊದಲಿಗೆ ಉಂಟಾಗಿತ್ತು. ಹೀಗಾಗಿ ಕೆಲವರು ಚೈನ್ ಎಳೆದು ರೈಲು ನಿಲ್ಲಿಸಿದ್ದರು. ರೈಲು ನಿಧಾನಗೊಳ್ಳುತ್ತಿದ್ದಂತೆ ಜೀವ ಉಳಿಸುವ ಪ್ರಯತ್ನದಲ್ಲಿ ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಅವರು ಪಕ್ಕದ ಹಳಿಯ ಮೇಲೆ ಇಳಿಯುತ್ತಿದ್ದಂತೆ, ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ಬೆಂಕಿಯ ವದಂತಿಗೆ ಕಾರಣವೇನು ಎಂಬ ವಿವರಗಳು ಅಸ್ಪಷ್ಟವಾಗಿವೆ ಮತ್ತು ದುರಂತ ಘಟನೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.