ಕೊಲಂಬೊ : ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ತಂಡ ಸಾಧಿಸಿದ ಐತಿಹಾಸಿಕ ಗೆಲುವು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಅನಿರೀಕ್ಷಿತ ಫಲಿತಾಂಶದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸಫ್, ಸಾಂಪ್ರದಾಯಿಕ ಎದುರಾಳಿ ಭಾರತ ತಂಡಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
ಫೆಬ್ರವರಿ 15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಯೂಸಫ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡ, ಆಸ್ಟ್ರೇಲಿಯಾವನ್ನು 23 ರನ್ಗಳಿಂದ ಮಣಿಸಿತ್ತು. ಈ ಫಲಿತಾಂಶವನ್ನು ಉಲ್ಲೇಖಿಸಿರುವ ಮೊಹಮ್ಮದ್ ಯೂಸಫ್, “ಕ್ರಿಕೆಟ್ ಮೈದಾನದಲ್ಲಿ ಕೇವಲ ಕಾಗದದ ಮೇಲಿನ ಅಂಕಿಅಂಶಗಳು ಕೆಲಸ ಮಾಡುವುದಿಲ್ಲ, ನಿರ್ದಿಷ್ಟ ದಿನದಂದು ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರೇ ಗೆಲ್ಲುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಸೋಲಿನ ಭೀತಿ ಇದೆಯೇ?
ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಯೂಸಫ್, ಆಸ್ಟ್ರೇಲಿಯಾ ತಂಡವು ತನ್ನ ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು ಮತ್ತು ಜಿಂಬಾಬ್ವೆ ತಂಡವು ಆತ್ಮವಿಶ್ವಾಸ ಹಾಗೂ ಸರಿಯಾದ ಕಾರ್ಯತಂತ್ರದ ಮೂಲಕ ಅವರನ್ನು ಸೋಲಿಸಿದೆ ಎಂದು ವಿಶ್ಲೇಷಿಸಿದ್ದಾರೆ. ಇದೇ ಮಾದರಿಯಲ್ಲಿ ಪಾಕಿಸ್ತಾನ ತಂಡ ಕೂಡ ಬಲಿಷ್ಠ ಭಾರತ ತಂಡದ ವಿರುದ್ಧ ಅದೇ ರೀತಿಯ ಹೋರಾಟದ ಮನೋಭಾವವನ್ನು ತೋರಬಲ್ಲದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. “ಉನ್ನತ ತಂಡಗಳನ್ನು ಸೋಲಿಸಲು ಆತ್ಮವಿಶ್ವಾಸ ಮುಖ್ಯ. ಪಾಕಿಸ್ತಾನ ಅದೇ ಉತ್ಸಾಹವನ್ನು ತೋರಿಸಿ ಭಾರತವನ್ನು ಸೋಲಿಸಬಹುದೇ? ಪಂದ್ಯಗಳನ್ನು ಮೈದಾನದಲ್ಲಿ ಗೆಲ್ಲಬೇಕೇ ಹೊರತು ಅಂಕಿಅಂಶಗಳ ಆಧಾರದ ಮೇಲಲ್ಲ,” ಎಂದು ಅವರು ಎಚ್ಚರಿಸಿದ್ದಾರೆ.
ಇತಿಹಾಸ ಮತ್ತು ಪ್ರಸ್ತುತ ಫಾರ್ಮ್
ವಿಶ್ವಕಪ್ ಇತಿಹಾಸವನ್ನು ಗಮನಿಸಿದರೆ, ಪಾಕಿಸ್ತಾನವು ಭಾರತದ ವಿರುದ್ಧ ಕೇವಲ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. 2021ರ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡ ಭಾರತವನ್ನು ಮಣಿಸಿತ್ತು. ಇದಾದ ಬಳಿಕ 2022ರ ಏಷ್ಯಾಕಪ್ನಲ್ಲಿ ಕೊನೆಯ ಬಾರಿ ಪಾಕಿಸ್ತಾನ ಗೆಲುವು ಕಂಡಿತ್ತು. ನಂತರದ ಒಂಬತ್ತು ಮುಖಾಮುಖಿಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದ್ದು, ಎಂಟು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಆದಾಗ್ಯೂ, ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ನಲ್ಲಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳೆರಡೂ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿವೆ. ಹೀಗಾಗಿ ಕೊಲಂಬೊದಲ್ಲಿ ನಡೆಯಲಿರುವ ಮುಂದಿನ ಪಂದ್ಯವು ಅಭಿಮಾನಿಗಳ ಪಾಲಿಗೆ ರೋಚಕತೆಯ ರಸದೌತಣ ನೀಡುವ ಸಾಧ್ಯತೆಯಿದೆ. ಭಾರತ ತಂಡದಲ್ಲಿ ಅನುಭವಿ ರೋಹಿತ್, ವಿರಾಟ್ ಇಲ್ಲದಿದ್ದರೂ ಯುವ ಪಡೆಯು ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ನಾಯಕ ಸೂರ್ಯಕುಮಾರ್ ಅವರ ಬಲದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ | ಚೆಪಾಕ್ ಅಂಗಳದಲ್ಲಿ ಅಮೆರಿಕದ ದರ್ಬಾರ್.. ನೆದರ್ಲೆಂಡ್ಸ್ ವಿರುದ್ಧ 93 ರನ್ಗಳ ಐತಿಹಾಸಿಕ ಜಯ!



















