ಲಕ್ನೋ: ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘ಘೂಸ್ಖೋರ್ ಪಂಡತ್’ (Ghooskhor Pandat) ಚಲನಚಿತ್ರದ ಶೀರ್ಷಿಕೆಯು ವಿವಾದಕ್ಕೆ ಕಾರಣವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರದ ನಿರ್ದೇಶಕ ಮತ್ತು ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಈ ಚಿತ್ರದ ವಿಷಯವು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿಪಡಿಸಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಘೂಸ್ಖೋರ್’ (ಲಂಚಕೋರ) ಎಂಬ ಪದದ ಜೊತೆಗೆ ‘ಪಂಡತ್’ ಎಂಬ ಪದವನ್ನು ಬಳಸಿರುವುದು ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂಬೈ ಮೂಲದ ವಕೀಲ ಅಶುತೋಷ್ ದುಬೆ ಅವರು ನೆಟ್ಫ್ಲಿಕ್ಸ್ ಮತ್ತು ಚಿತ್ರದ ನಿರ್ಮಾಪಕರಿಗೆ ಕಾನೂನು ನೋಟಿಸ್ ನೀಡಿದ್ದು, ಈ ಶೀರ್ಷಿಕೆಯು ಮಾನಹಾನಿಕರವಾಗಿದೆ ಎಂದು ದೂರಿದ್ದಾರೆ. ಇದಲ್ಲದೆ, ಚಿತ್ರದ ಶೀರ್ಷಿಕೆಗೆ ಅಧಿಕೃತ ಅನುಮತಿ ಪಡೆದಿಲ್ಲ ಎಂದು ‘ಫಿಲ್ಮ್ ಮೇಕರ್ಸ್ ಕಂಬೈನ್’ ಕೂಡ ನೋಟಿಸ್ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ನಿರ್ದೇಶಕ ನೀರಜ್ ಪಾಂಡೆ ಸ್ಪಷ್ಟನೆ
ವಿವಾದದ ಬೆನ್ನಲ್ಲೇ ನಿರ್ದೇಶಕ ನೀರಜ್ ಪಾಂಡೆ ಅವರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ನಮ್ಮ ಚಿತ್ರವು ಸಂಪೂರ್ಣ ಕಾಲ್ಪನಿಕ ಪೊಲೀಸ್ ಕಥೆಯಾಗಿದ್ದು, ಇಲ್ಲಿ ‘ಪಂಡತ್’ ಎಂಬ ಪದವನ್ನು ಕೇವಲ ಒಂದು ಪಾತ್ರದ ಹೆಸರಾಗಿ ಬಳಸಲಾಗಿದೆ. ಯಾವುದೇ ಜಾತಿ, ಧರ್ಮ ಅಥವಾ ಸಮುದಾಯವನ್ನು ಅವಹೇಳನ ಮಾಡುವುದು ನಮ್ಮ ಉದ್ದೇಶವಲ್ಲ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರದ ಎಲ್ಲಾ ಪ್ರಚಾರದ ಪೋಸ್ಟರ್ ಮತ್ತು ವಿಡಿಯೋಗಳನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೋಜ್ ಬಾಜಪೇಯಿ ಹೇಳಿದ್ದೇನು?
ಚಿತ್ರದಲ್ಲಿ ಲಂಚಕೋರ ಪೊಲೀಸ್ ಅಧಿಕಾರಿ ಅಜಯ್ ದೀಕ್ಷಿತ್ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ ಅವರು ಎಕ್ಸ್ (X) ಖಾತೆಯ ಮೂಲಕ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. “ನಾನು ಜನರ ಭಾವನೆಗಳನ್ನು ಗೌರವಿಸುತ್ತೇನೆ. ನಟನಾಗಿ ನಾನು ಕೇವಲ ಕಥೆ ಮತ್ತು ಪಾತ್ರದ ಮೇಲೆ ಗಮನ ಹರಿಸಿದ್ದೆ. ಒಬ್ಬ ವ್ಯಕ್ತಿಯ ತಪ್ಪು ನಿರ್ಧಾರಗಳು ಮತ್ತು ಅವನ ಆತ್ಮಸಾಕ್ಷಿಯ ಅರಿವಿನ ಬಗ್ಗೆ ಈ ಚಿತ್ರವಿದೆಯೇ ಹೊರತು ಯಾವುದೇ ಸಮುದಾಯದ ಬಗ್ಗೆ ಹೇಳಿಕೆ ನೀಡುವುದಕ್ಕಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಶಸ್ತ್ರಾಸ್ತ್ರಗಳಿಲ್ಲದೆ ಶೋಪಿಯಾನ್ಗೆ ಮರಳುವೆ ಎಂದು ಎಂದಿಗೂ ಭಾವಿಸಿರಲಿಲ್ಲ | ನಿವೃತ್ತ ಸೇನಾ ಅಧಿಕಾರಿಯ ಭಾವುಕ ಮಾತು ವೈರಲ್!



















