ಬಳ್ಳಾರಿ: ಹಿಂದುಳಿದ ನಾಯಕ ಸಿದ್ದರಾಮಯ್ಯ ಬೆಳೆಯುವುದು ಸುಲಭದ ಮಾತಲ್ಲ. ಬೆಂಕಿ ಮೇಲೆ, ಹಗ್ಗದ ಮೇಲೆ ನಡೆದಂತೆ ಇರುತ್ತದೆ ಎಂದು ವಿಪ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮದಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಮಹಾ ನಾಯಕರು ಅಂದ್ರೆ ಸಂಗೊಳ್ಳಿರಾಯಣ್ಣ, ಕನಕ ದಾಸರು. ಇವರು ಕುರುಬ ಸಮಾಜದ ಎರಡು ಕಣ್ಣುಗಳು ಇದ್ದಂತೆ. ಶೌರ್ಯಕ್ಕೆ ಸಂಗೊಳ್ಳಿರಾಯಣ್ಣ, ಭಕ್ತಿಗೆ ಕನಕ ದಾಸರು. ಹೀಗಾಗಿ ಇಂತಹ ಮಹಾನ್ ವ್ಯಕ್ತಿಗಳು ಹಾಕಿ ಕೊಟ್ಟಿರುವ ದಾರಿಯಲ್ಲಿ ನಾವು ನಡೆಯಬೇಕು ಎಂದಿದ್ದಾರೆ.
ಕಂಪ್ಲಿ ಕ್ಷೇತ್ರಕ್ಕೆ ನಾನು ಇದೇ ಮೊದಲ ಬಾರಿ ಬಂದಿದ್ದು. ಸಿದ್ದರಾಮಯ್ಯ ಅವವರ ಮೇಲೆ ನೀವಿಟ್ಟ ಗೌರವ ಇವತ್ತು ನನಗೆ ಸಿಕ್ಕಿರುವ ಪ್ರೀತಿಯಾಗಿದೆ. ಸಿದ್ದರಾಮಯ್ಯ ಕುರುಬ ಸಮಾಜ, ಹಿಂದುಳಿದ ವರ್ಗದ ಸಮಾಜ ಎಲ್ಲ ಸಮಾಜಗಳನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಹಿಂದೂಳಿದ ನಾಯಕ ಸಿದ್ದರಾಮಯ್ಯ ಬೆಳೆಯಬೇಕಾದರೆ ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡುವವರೇ ಹೆಚ್ಚು. ಆದರೆ, ಸಿದ್ದರಾಮಯ್ಯ ಎಲ್ಲವನ್ನೂ ಮೀರಿ ನಿಂತು ಬೆಳೆದು 5 ವರ್ಷ ಸಿಎಂ ಆಗಿ ಅಧಿಕಾರ ಅನುಭವಿಸಿದರು. ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಂದಿಸುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕುತಂತ್ರ ನಡೆಸುತ್ತಿವೆ. ಕೇಂದ್ರದಿಂದ ಒತ್ತಡ ಹಾಕಿಸಿ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರು ಬಗ್ಗಲ್ಲ, ಜಗ್ಗಲ್ಲ. ಸಿದ್ದರಾಮಯ್ಯ ನವರ ಮೇಲೆ ನಿಮ್ಮ ಪ್ರೀತಿ ಬೆಂಬಲ ಹೀಗೆ ಇರಲಿ ಎಂದು ಮನವಿ ಮಾಡಿದ್ದಾರೆ.