ಮುಂಬೈ/ಜೈಪುರ : 2026ರ ಐಪಿಎಲ್ ಟೂರ್ನಿಗೆ ಕಹಳೆ ಮೊಳಗುವ ಮುನ್ನವೇ ರಾಜಸ್ಥಾನ್ ರಾಯಲ್ಸ್ (ಆರ್ಆರ್) ಪಾಳಯದಲ್ಲಿ ಭಾರಿ ಸಂಚಲನ ಉಂಟಾಗಿದೆ. ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡದಲ್ಲಿ ನಾಯಕತ್ವದ ಬದಲಾವಣೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದು ತಂಡದ ಪ್ರಮುಖ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ನಾಯಕತ್ವದ ಆಕಾಂಕ್ಷಿಯಾಗಿದ್ದ ಜೈಸ್ವಾಲ್ ಅವರನ್ನು ಕಡೆಗಣಿಸಿ, ಆಲ್ ರೌಂಡರ್ ರಿಯಾನ್ ಪರಾಗ್ ಅವರಿಗೆ ಮಣೆ ಹಾಕಲು ಫ್ರಾಂಚೈಸಿ ನಿರ್ಧರಿಸಿರುವುದು ಜೈಸ್ವಾಲ್ ತಂಡ ತೊರೆಯುವ ನಿರ್ಧಾರಕ್ಕೆ ಬರುವಂತೆ ಮಾಡಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಟಿ20 ವಿಶ್ವಕಪ್ ನಂತರ ನಡೆಯಲಿರುವ ಐಪಿಎಲ್ 2026ಕ್ಕೆ ಈಗಾಗಲೇ ಕೆಲವು ತಂಡಗಳು ಸಿದ್ಧತೆ ಆರಂಭಿಸಿವೆ. ಆದರೆ, ರಾಜಸ್ಥಾನ್ ರಾಯಲ್ಸ್ ಇನ್ನೂ ತನ್ನ ಅಧಿಕೃತ ಶಿಬಿರವನ್ನು ಆರಂಭಿಸಿಲ್ಲವಾದರೂ, ಆಡಳಿತಾತ್ಮಕವಾಗಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಸಂಜು ನಿರ್ಗಮನ, ಜಡೇಜಾ ಆಗಮನ : ತೆರವಾದ ನಾಯಕನ ಸ್ಥಾನ
ರಾಜಸ್ಥಾನ್ ರಾಯಲ್ಸ್ ತಂಡವು ಈ ಬಾರಿ ಅತ್ಯಂತ ಮಹತ್ವದ ಮತ್ತು ಅಷ್ಟೇ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ತಂಡದ ದೀರ್ಘಕಾಲದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಕ್ಕೆ ಬಿಟ್ಟುಕೊಡಲಾಗಿದ್ದು, ಪ್ರತಿಯಾಗಿ ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ‘ಟ್ರೇಡ್’ (ವಿನಿಮಯ) ಪ್ರಕ್ರಿಯೆಯ ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನಾಯಕನ ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ಸಹಜವಾಗಿಯೇ ರವೀಂದ್ರ ಜಡೇಜಾ ಅಥವಾ ಯುವ ತಾರೆ ಯಶಸ್ವಿ ಜೈಸ್ವಾಲ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಫ್ರಾಂಚೈಸಿ ಮಾಲೀಕರು ಅಸ್ಸಾಂನ ಯುವ ಆಲ್ ರೌಂಡರ್ ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಜೈಸ್ವಾಲ್ ಅಸಮಾಧಾನಕ್ಕೆ ಕಾರಣವೇನು?
2020ರಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಯಶಸ್ವಿ ಜೈಸ್ವಾಲ್, ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭಾರತೀಯ ಕ್ರಿಕೆಟ್ನ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿರುವ ಜೈಸ್ವಾಲ್, ನಾಯಕತ್ವದ ನಿರೀಕ್ಷೆಯಲ್ಲಿದ್ದರು. ವಿಶೇಷವಾಗಿ ಸಮಕಾಲೀನ ಆಟಗಾರ ಶುಭಮನ್ ಗಿಲ್ ಅವರು ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ನಾಯಕನಾಗಿ ಮತ್ತು ಭಾರತ ತಂಡದ ಉಪನಾಯಕನಾಗಿ ಬೆಳೆದ ರೀತಿ ಜೈಸ್ವಾಲ್ ಅವರಲ್ಲೂ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕಿತ್ತು.
ಗಿಲ್ ಅವರೊಂದಿಗೆ ಪೈಪೋಟಿಗೆ ಇಳಿಯಲು ಮತ್ತು ತಾವೂ ನಾಯಕತ್ವದ ಗುಣಗಳನ್ನು ಹೊಂದಿದ್ದೇನೆ ಎಂದು ಸಾಬೀತುಪಡಿಸಲು ಜೈಸ್ವಾಲ್ ಅವರಿಗೆ ಐಪಿಎಲ್ ಒಂದು ಉತ್ತಮ ವೇದಿಕೆಯಾಗಿತ್ತು. ತಾವು ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರೂ, ನಾಯಕತ್ವದ ರೇಸ್ನಲ್ಲಿ ಗಿಲ್ ಅವರಿಗಿಂತ ಹಿಂದಿಳಿದಿರುವುದು ಜೈಸ್ವಾಲ್ ಅವರನ್ನು ಕಾಡುತ್ತಿದೆ. ಇದೀಗ ತಮ್ಮದೇ ಐಪಿಎಲ್ ತಂಡದಲ್ಲಿ, ತಮಗಿಂತ ಕಡಿಮೆ ಅನುಭವ ಹೊಂದಿರುವ ಅಥವಾ ತಾಂತ್ರಿಕವಾಗಿ ತಮಗಿಂತ ಕೆಳಗಿನ ಹಂತದಲ್ಲಿರುವ ರಿಯಾನ್ ಪರಾಗ್ ಅವರಿಗೆ ನಾಯಕತ್ವ ನೀಡುತ್ತಿರುವುದು ಜೈಸ್ವಾಲ್ ಅವರ ಅಸಮಾಧಾನದ ಕಟ್ಟೆ ಒಡೆಯುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಕಾಶ್ ಚೋಪ್ರಾ ಹೇಳಿದ್ದೇನು?
ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಜನಪ್ರಿಯ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರು ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ಸುಳಿವು ನೀಡಿದ್ದಾರೆ. ಅಭಿಮಾನಿಯೊಬ್ಬರು, “ಜೈಸ್ವಾಲ್ ಇನ್ನು ಹೆಚ್ಚು ಕಾಲ ಆರ್ಆರ್ನಲ್ಲಿ ಉಳಿಯುವುದಿಲ್ಲ ಎಂದು ಬರೆದಿಟ್ಟುಕೊಳ್ಳಿ” ಎಂದು ಹೇಳಿದ ಮಾತಿಗೆ ಪ್ರತಿಕ್ರಿಯಿಸಿರುವ ಚೋಪ್ರಾ, “ಇದು ಸಾಕಷ್ಟು ಸಾಧ್ಯವಿದೆ (Quite Possible). ಆಟಗಾರನ ಕನಸುಗಳು ಮತ್ತು ತಂಡದ ದೃಷ್ಟಿಕೋನ ಒಂದಕ್ಕೊಂದು ಹೊಂದಾಣಿಕೆಯಾಗದಿದ್ದರೆ ಹೀಗಾಗುವುದು ಸಹಜ,” ಎಂದು ಹೇಳಿದ್ದಾರೆ.
ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ಮಾಡುವ ನಿರ್ಧಾರದ ಬಗ್ಗೆಯೂ ಚೋಪ್ರಾ ಮಾತನಾಡಿದ್ದು, “ಪರಾಗ್ ಅವರನ್ನು ಫ್ರಾಂಚೈಸಿ ಮುಂದಿನ ನಾಯಕನನ್ನಾಗಿ ರೂಪಿಸುತ್ತಿತ್ತು, ಆದ್ದರಿಂದ ಈ ನಿರ್ಧಾರ ತರ್ಕಬದ್ಧವಾಗಿದೆ. ಆದರೆ, ಜೈಸ್ವಾಲ್ ನಾಯಕತ್ವ ಕೇಳಿರಬಾರದೇ? ಖಂಡಿತವಾಗಿಯೂ ಅವರು ಕೇಳಿರಬೇಕು ಮತ್ತು ಕೇಳುವ ಎಲ್ಲ ಅರ್ಹತೆಯೂ ಅವರಿಗಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಭವಿಷ್ಯದ ನಡೆ ಏನು?
ಈ ಹಿಂದೆ ಮುಂಬೈ ರಣಜಿ ತಂಡವನ್ನು ತೊರೆದು ಗೋವಾ ತಂಡದ ನಾಯಕತ್ವ ವಹಿಸಿಕೊಳ್ಳಲು ಜೈಸ್ವಾಲ್ ಮುಂದಾಗಿದ್ದರು ಎಂಬ ಸುದ್ದಿಗಳಿದ್ದವು, ಆದರೆ ಅಂತಿಮವಾಗಿ ಅವರು ಮುಂಬೈನಲ್ಲೇ ಉಳಿದಿದ್ದರು. ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಖಾಯಂ ಸ್ಥಾನ ಪಡೆದಿದ್ದರೂ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮತ್ತು ಟಿ20ಯಲ್ಲಿ ಇನ್ನೂ ಭದ್ರ ನೆಲೆ ಕಂಡುಕೊಳ್ಳಲು ಅವರು ಹೋರಾಡುತ್ತಿದ್ದಾರೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ನಲ್ಲಿ ಸ್ವತಃ ವಾದಿಸಿ ಗೆದ್ದ 19 ವರ್ಷದ ಯುವಕ | ವೈದ್ಯಕೀಯ ಸೀಟಿಗಾಗಿ ಕಾನೂನು ಸಮರ!



















