ಕೊಪ್ಪಳ: ಗೃಹಲಕ್ಷ್ಮೀ ಯೋಜನೆಯ ಹಣವನ್ನು ಹಲವರು ಉತ್ತಮ ಕಾರ್ಯಕ್ಕೆ ಸದ್ಭಳಕೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ. ಈಗ ಈ ಸಾಲಿಗೆ ಮತ್ತೋರ್ವ ಮಹಿಳೆ ಬಂದಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ನಾಗರಡ್ಡಿ ಎಂಬುವವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಬಳಕೆ ಮಾಡಿಕೊಂಡು ಸಾರ್ವಜನಿಕ ರಸ್ತೆ ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ.
ಮಹಿಳೆ ವಾಸಿಸುತ್ತಿರುವ ಯರೇಹಂಚಿನಾಳ ಗ್ರಾಮದಿಂದ ಕೋಟಮಚಗಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ರಸ್ತೆಯುದ್ದಕ್ಕೂ ಮುಳ್ಳು-ಕಂಟಿಗಳು ಬೆಳೆದು ನಿಂತಿದ್ದವು. ಇದರಿಂದಾಗಿ ವಾಹನ ಸವಾರರು ಹಾಗೂ ಜನರು ಹೋಗಲು ಪರದಾಟ ನಡೆಸುವಂತಾಗಿತ್ತು. ಆದರೆ, ಸಂಬಂಧಪಟ್ಟವರು ಮಾತ್ರ ಈ ಸಮಸ್ಯೆ ಬಗೆಹರಿಸಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯು ತಮಗೆ ಬಂದ ಗೃಹಲಕ್ಷ್ಮೀ ಹಣದಿಂದಲೇ ಈ ರಸ್ತೆ ಸ್ವಚ್ಛಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಜೆಸಿಬಿಯಿಂದ ರಸ್ತೆ ಬದಿ ಬೆಳೆದಿದ್ದ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ, ರಸ್ತೆ ಸ್ವಚ್ಛಗೊಳಿಸಿ ಜನರಿಗೆ ಸಮರ್ಪಿಸಿದ್ದಾರೆ. ಮಹಿಳೆಯ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.