ಬಾಗಲಕೋಟೆ: ಬೇಸಿಗೆ ಬಂತೆಂದರೆ ಸಾಕು ಲೋಡ್ ಶೆಡ್ಡಿಂಗ್ ಹೆಚ್ಚಾಗಿ ಬಿಡುತ್ತದೆ. ಒಂದೆಡೆ ಬಿಸಿಲಿನ ತಾಪಮಾನ, ಮತ್ತೊಂದೆಡೆ ಕೈ ಕೊಡುವ ವಿದ್ಯುತ್ ನಿಂದಾಗಿ ಜನರು ರೋಸಿ ಹೋಗಿ ಬಿಟ್ಟಿರುತ್ತಾರೆ. ಹೀಗಾಗಿ ಈ ಬಾರಿ ಲೋಡ್ ಶೆಡ್ಡಿಂಗ್ ಬಗ್ಗೆ ಜನ ಮತ್ತಷ್ಟು ಭಯಭೀತರಾಗಿದ್ದರು. ಗ್ಯಾರಂಟಿಯಿಂದಾಗಿ ವಿದ್ಯುತ್ ಫ್ರೀ(Electricity free) ಇದೆ. ಹೀಗಾಗಿ ಸರ್ಕಾರ ಲೋಡ್ ಶೆಡ್ಡಿಂಗ್ ಹೆಚ್ಚು ಮಾಡಬಹುದು ಎಂದು ಭಾವಿಸಿದ್ದರು. ಸದ್ಯ ಇದಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಪ್ರತಿ ದಿನಕ್ಕೆ 17 ಸಾವಿರ ಮೆಗಾ ವಿದ್ಯುತ್ ಬೇಡಿಕೆಯಿದೆ. ಒಂದು ವೇಳೆ ಕೊರತೆ ಉಂಟಾದರೆ ಬೇರೆ ರಾಜ್ಯಗಳಿಂದ ಖರೀದಿಸುತ್ತೇವೆ. ಕಳೆದ ವರ್ಷವೂ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈ ವರ್ಷವೂ ಮಾಡುವುದಿಲ್ಲ ಎಂದಿದ್ದಾರೆ.
ತೋಟದ ಮನೆಗಳಲ್ಲಿ ವಾಸವಾಗಿರುವವರಿಗೆ ನಿರಂತರ ಜ್ಯೋತಿ (constant flame) ಯೋಜನೆಯಡಿ ವಿದ್ಯುತ್ ಸೌಲಭ್ಯ ಒದಗಿಸಲು ಚಿಂತನೆಯಿದೆ. ಹಗಲಿನಲ್ಲಿ ರೈತರ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್ ಪೂರೈಸುವ ವಿಚಾರ ಸರ್ಕಾರದ ಮುಂದಿದೆ. ಕುಸುಮ್ ಸಿ ಯೋಜನೆಯಡಿ ಪಂಪ್ಸೆಟ್ಗಳಿಗೆ ಸೋಲಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ. 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನಾನಾ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ 3 ಸಾವಿರ ಲೈನ್ ಮನ್ ಗಳ ನೇಮಕಾತಿಗೆ ಪ್ರಕ್ರಿಯೆ ನಡೆದಿದೆ ಎಂದಿದ್ದಾರೆ.