ಕರ್ನಾಟಕಕ್ಕೆ ಹೇಗೆ ಬೆಂಗಳೂರು ಐಟಿ ಸಿಟಿಯೋ ಹಾಗೆ ಮಹಾರಾಷ್ಟ್ರ ಪಾಲಿಗೆ ಪುಣೆ. ಎರಡೂ ನಗರಗಳು ಆರ್ಥಿಕವಾಗಿ ಆಯಾ ರಾಜ್ಯಗಳಿಗೆ ಭರಪೂರ ಆದಾಯ ನೀಡುತ್ತಿವೆ. ಇಂತಹ ಎರಡು ನಗರಗಳು ಪರಸ್ಪರ ಬೆರೆತರೆ ಹೇಗಿರಲಿದೆ. ಹಾಗಂತಾ ಈ ಪಟ್ಟಣಗಳೇನು ಒಂದೇ ಆಗುತ್ತಿಲ್ಲ.
ಬದಲಿಗೆ ಪರಸ್ಪರ ಹತ್ತಿರವಾಗುತ್ತಿವೆ. ಹೌದು! ಬಹುತೇಕರು ಪುಣೆ-ಬೆಂಗಳೂರು ಹೈವೆ ಅಥವಾ ಪಿಬಿ ರಸ್ತೆಯಲ್ಲಿ ಸಂಚರಿಸಿರುತ್ತೀರಿ. ಇಂದಿಗೆ ಪುಣೆ-ಬೆಂಗಳೂರು ನಡುವೆ ಸಂಚಾರಕ್ಕೆ 18 ಗಂಟೆಗಳ ಅವಧಿ ಬೇಕಾಗುತ್ತದೆ. ಆದರೆ, ಇದೊಂದು ಯೋಜನೆ ಸಾಕಾರವಾದ್ರೆ, ಪುಣೆ-ಬೆಂಗಳೂರು ನಡುವೆ ಕೆಲವೇ ಗಂಟೆಗಳಲ್ಲಿ ಸಂಚರಿಸಿಬಿಡಬಹುದು.
40 ಸಾವಿರ ಕೋಟಿಯ ಮೆಗಾ ಎಕ್ಸ್ ಪ್ರೆಸ್ ಹೈವೇ ಯೋಜನೆ
ದಶಕಗಳಿಂದಲೂ ಪುಣೆ-ಬೆಂಗಳೂರು ನಡುವೆ ಎನ್ ಹೆಚ್ 4 ಸಂಪರ್ಕ ಕಲ್ಪಿಸುತ್ತಾ ಬರುತ್ತಿದೆ. ಆದರೆ, ರಸ್ತೆ ಚತುಷ್ಪತವಾಗುತ್ತಿದ್ದಂತೆ ಈ ರಸ್ತೆಯನ್ನು ಇತ್ತ ಚೆನ್ನೈವರೆಗೂ ಅತ್ತ ಮುಂಬೈವರೆಗೂ ವಿಸ್ತರಿಸಲಾಗಿತ್ತು. ಪರಿಣಾಮ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವುದಲ್ಲದೆ, ಸದಾ ದಟ್ಟಣೆ ಕೂಡಾ. ಇದಕ್ಕಾಗಿಯೇ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವಾಲಯ ಹೊಸದೊಂದು ಯೋಜನೆಯನ್ನು ಸಿದ್ಧಪಡಿಸಿದೆ.
40 ಸಾವಿರ ಕೋಟಿಯ ಈ ಯೋಜನೆ ಮಹಾರಾಷ್ಟ್ರದ ಪುಣೆಯ ಕಂಜಲೆಯಿಂದ ಆರಂಭವಾಗಿ ಸತಾರ, ಸಾಂಗ್ಲಿ ಮಾರ್ಗವಾಗಿ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ಗ್ರಾಮಾಂತರ ತಲುಪಲಿದೆ. ರಾಜ್ಯದ 12 ಜಿಲ್ಲೆಗಳು ಈ ನೂತನ ಮಾರ್ಗದ ಲಾಭ ಪಡೆಯಲಿವೆ. ಅಷ್ಟೇ ಅಲ್ಲಾ ಪ್ರಯಾಣದ ಅವಧಿ 18 ಗಂಟೆ ಬದಲಿಗೆ ಕೇವಲ 6 ಗಂಟೆಗೆ ತಗ್ಗಲಿದೆ.
ನೂತನ ಹೆದ್ದಾರಿಯ ವಿಶೇಷತೆಗಳಾದ್ರು ಏನು
ಈಗಿರುವ ಹೆದ್ದಾರಿಗೆ ಪರ್ಯಾಯವಾಗಿ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಕರ್ನಾಟಕದ 12 ಜಿಲ್ಲೆಗಳು ಈ ಗ್ರೀನ್ ಕಾರಿಡಾರ್ ನ ಅಂಗವಾಗಲಿವೆ. ರಸ್ತೆ ಜೊತೆ ಉದ್ಯಮ, ಹೂಡಿಕೆ ಹರಿದು ಬರಲಿದ್ದು, ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ.
ಇನ್ನು ಈ ನೂತನ ಹೈವೆಯಲ್ಲಿ ಎರಡು ಕಡೆ ವಿಮಾನ ಟೇಕ್ ಆಫ್,ಲ್ಯಾಂಡಿಂಗ್ ಗೆ ವ್ಯವಸ್ಥೆ, 55 ಫೈಓವರ್ ಗಳು, 22 ಇಂಟರ್ ಚೇಂಜ್ ಗಳು ನಿರ್ಮಾಣವಾಗಲಿವೆ. ಅಷ್ಟೇ ಅಲ್ಲಾ ಈ ಹೆದ್ದಾರಿಯಲ್ಲಿ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಸಾಗಬಹುದಾಗಿದೆ. ಈ ಕನಸು ಸಾಕಾರವಾದ್ರೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಕ್ಕೆ ಅಮೃತ ಸಿಕ್ಕಂತಾಗಲಿದೆ.