ಮೀರತ್: ಉತ್ತರಪ್ರದೇಶದ ಮೀರತ್ ಕೊಲೆ ಪ್ರಕರಣವು (ಪತಿಯನ್ನು ಕೊಂದು ತುಂಡರಿಸಿ ಟ್ಯಾಂಕ್ ನೊಳಗೆ ಹಾಕಿ ಹಸಿ ಸಿಮೆಂಟ್ ತುಂಬಿದ ಕೇಸ್) ಭಾರೀ ಸುದ್ದಿಯಾದ ಬೆನ್ನಲ್ಲೇ ಅದೇ ಜಿಲ್ಲೆಯಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ ವರದಿಯಾಗಿದೆ. ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ನಿದ್ರೆಯಲ್ಲಿದ್ದ ಪತಿಯ ಕತ್ತು ಹಿಸುಕಿ ಕೊಂದು, ನಂತರ ಹಾಸಿಗೆಗೆ ವಿಷಪೂರಿತ ಹಾವನ್ನು ಎಸೆದು, ಹಾವು ಕಚ್ಚಿದ್ದರಿಂದ ಪತಿ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ ಘಟನೆ ನಡೆದಿದೆ. ಪಶ್ಚಿಮ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಗುರುವಾರ ನಡೆದಿರುವ ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ ಅವರ ಮೃತದೇಹವು ಭಾನುವಾರ ಬೆಳಿಗ್ಗೆ ಹಾಸಿಗೆಯ ಮೇಲೆ ಪತ್ತೆಯಾಗಿತ್ತು. ಅವರ ದೇಹ ಪೂರ್ತಿ ಹಾವು ಕಡಿತದ ಗುರುತುಗಳು ಎದ್ದು ಕಾಣುತ್ತಿದ್ದವು. ಅಲ್ಲದೇ ಕೋಣೆಯಲ್ಲಿ ವಿಷಪೂರಿತ ಹಾವೂ ಸಿಕ್ಕಿತ್ತು. ಹಾವು ಕಡಿತದಿಂದಾಗಿ ಪತಿ ಮೃತಪಟ್ಟಿರುವುದಾಗಿ ಪತ್ನಿಯು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.
ಆದರೆ, ಮರಣೋತ್ತರ ಪರೀಕ್ಷೆಯ ವರದಿಯು, ಅಮಿತ್ ವಿಷದಿಂದ ಸತ್ತಿಲ್ಲ, ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಈ ವರದಿಯಿಂದ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಅಂತಿಮವಾಗಿ ಅಮಿತ್ ಅವರ ಪತ್ನಿ ರವಿತಾ ಮತ್ತು ಅವಳ ಪ್ರಿಯಕರ ಅಮರ್ದೀಪ್ ನನ್ನು ಬಂಧಿಸಲಾಯಿತು” ಎಂದು ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಹೇಳಿದ್ದಾರೆ
ಪ್ರಿಯಕರ ಅಮರ್ದೀಪ್ ಮೊದಲಿಗೆ 1,000 ರೂ.ಗಳನ್ನು ನೀಡಿ ಮಹಮೂದ್ಪುರ ಸಿಖೇಡಾ ಗ್ರಾಮದ ಹಾವಾಡಿಗನಿಂದ ವಿಷದ ಹಾವನ್ನು ಖರೀದಿಸಿದ್ದ. ಕೊಲೆ ನಡೆದ ರಾತ್ರಿ, ಅಮಿತ್ ನಿದ್ರೆಗೆ ಜಾರುವುದನ್ನೇ ಕಾಯುತ್ತಿದ್ದ ಪತ್ನಿ ರವಿತಾ ಮತ್ತು ಪ್ರಿಯಕರ ಅಮರ್ದೀಪ್, ನಂತರ ಅಮಿತ್ ನಿದ್ರೆಗೆ ಜಾರಿದ ಕೂಡಲೇ ಕತ್ತು ಹಿಸುಕಿ ಕೊಂದಿದ್ದರು. ನಂತರ ಯಾರಿಗೂ ಅನುಮಾನ ಬಾರದಂತೆ ನೋಡಿಕೊಳ್ಳುವ ಸಲುವಾಗಿ, ತಾವು ತಂದಿದ್ದ ವಿಷದ ಹಾವನ್ನು ಅಮಿತ್ ಅವರ ದೇಹದ ಕೆಳಗೆ ಇರಿಸಿದರು. ಅದು ಮರಣೋತ್ತರವಾಗಿ ಅಮಿತ್ ನನ್ನು ಹಲವು ಬಾರಿ ಕಚ್ಚಿತ್ತು” ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ರವಿತಾ ಮತ್ತು ಅಮರ್ದೀಪ್ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅಮಿತ್ ಅವರೊಂದಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅಮರ್ದೀಪ್ ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
“ಅಮಿತ್ಗೆ ಇತ್ತೀಚೆಗೆ ತನ್ನ ಹೆಂಡತಿಯ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಅವರು ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಇದರಿಂದ ರೊಚ್ಚಿಗೆದ್ದ ರವಿತಾ ಮತ್ತು ಅಮರ್ದೀಪ್ ಹೇಗಾದರೂ ಮಾಡಿ ಅಮಿತ್ ರನ್ನು ಕೊಲ್ಲಬೇಕೆಂದು ಸಂಚು ರೂಪಿಸಿದರು. ಸಿಕ್ಕಿಬೀಳದಂತೆ ನೋಡಿಕೊಳ್ಳಲು, ಗೂಗಲ್ ಮತ್ತು ಯೂಟ್ಯೂಬ್ನಲ್ಲಿ ಕೊಲೆ ತಂತ್ರಗಳಿಗಾಗಿ ಹುಡುಕಾಡಿದ್ದರು” ಎಂದೂ ಪೊಲೀಸರು ತಿಳಿಸಿದ್ದಾರೆ.