ಆಂಧ್ರ ಪ್ರದೇಶ: ಕಾರು ಕೊಡಿಸುವ ನೆಪದಲ್ಲಿ ಕರೆಸಿ, ಬಾಮೈದನಿಂದಲೇ ಬಾವನನ್ನು ಕೊಲೆ ಮಾಡಿದ್ದು, ಪತ್ನಿಯ ಕೈವಾಡದ ಬಗ್ಗೆಯೂ ಮಾಹಿತಿ ಹೊರಬಿದ್ದಿರುವ ಘಟನೆ ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮೃತ ವ್ಯಕ್ತಿಯನ್ನು ವಿನಯ್ ಕುಮಾರ್ ಎಂದು ಗುರುತಿಸಲಾಗಿದೆ.
ಮೂಲತಃ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದ ವಿನಯ್ ಕುಮಾರ್, ಖಾಸಗಿ ಕಂಪನಿಯನ್ನು ನಡೆಸುತ್ತಿದ್ದರು. ಸುಮಾರು 11 ತಿಂಗಳ ಹಿಂದೆ ಮೇಘಾ ಎಂಬುವವಳೊಂದಿಗೆ ಕುಟುಂಬದ ಒಪ್ಪಿಗೆಯಂತೆ ಮದುವೆಯಾಗಿದ್ದರು. ಮಾಹಿತಿಯ ಪ್ರಕಾರ, ಕಾರು ಖರೀದಿಸಲು ಹಣ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿ ಪತ್ನಿಯ ಅಣ್ಣ ರಾಜು, ವಿನಯ್ ನನ್ನು ಲೇಪಾಕ್ಷಿಗೆ ಕರೆಸಿಕೊಂಡಿದ್ದಾನೆ. ಪತ್ನಿಯೇ “ಹೋಗಿ ಹಣ ತೆಗೆದುಕೊಂಡು ಬಾ” ಎಂದು ಕಳುಹಿಸಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.
ಈ ನಡುವೆ, ಎರಡು ದಿನಗಳಾದರೂ ವಿನಯ್ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕುಟುಂಬಸ್ಥರಿಗೆ ಅನುಮಾನ ಮೂಡಿತು. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ, ಕುಟುಂಬಸ್ಥರು ಲೇಪಾಕ್ಷಿಗೆ ತೆರಳಿ ಹುಡುಕಾಟ ಆರಂಭಿಸಿದರು. ವಿನಯ್ ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿದ್ದನು. ಆ ಬೈಕ್ಗೆ ಅಳವಡಿಸಿದ್ದ ಜಿಪಿಎಸ್ ಮೂಲಕ ಹುಡುಕಾಟ ನಡೆಸಿದಾಗ, ಬೈಕ್ ಪತ್ತೆಯಾಯಿತು. ಅದರಿಂದ ಸುಮಾರು 100 ಮೀಟರ್ ದೂರದಲ್ಲಿ ವಿನಯ್ ಅವರ ಮೃತದೇಹ ಕಂಡುಬಂದಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಬ್ಯಾಟ್ ಮತ್ತು ರಾಡ್ ಬಳಸಿ ಕ್ರೂರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ನಡೆದ ವೈಮನಸ್ಸಿನ ಹಿನ್ನೆಲೆಯಲ್ಲಿ, ಸೇಡು ತೀರಿಸಿಕೊಳ್ಳಲು ಈ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಲೇಪಾಕ್ಷಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರಾಜು ಇನ್ನೂ ಪೊಲೀಸರ ವಶಕ್ಕೆ ಸಿಕ್ಕಿಲ್ಲ. ಪೊಲೀಸರು ಆರೋಪಿ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ : ತಂದೆ ಮಗನ ಲಾಕಪ್ ಡೆತ್ ಕೇಸ್ – 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಮಧುರೈ ಕೋರ್ಟ್!



















