ನವದೆಹಲಿ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಭಾಷಾ ಯುದ್ಧದ(Language Row) ಬೆಂಕಿಗೆ ಈಗ ನಟ, ರಾಜಕಾರಣಿ ಪವನ್ ಕಲ್ಯಾಣ್ ತುಪ್ಪ ಸುರಿದಿದ್ದಾರೆ. ಹಣಕಾಸಿನ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡಲು ತಮಿಳುನಾಡಿನ ನಾಯಕರು ಅನುಮತಿ ನೀಡುತ್ತಾರೆ. ಆದರೆ ಹಿಂದಿ ಭಾಷೆಯನ್ನು ಮಾತ್ರ ವಿರೋಧಿಸುತ್ತಾರೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆರೋಪಿಸಿದ್ದಾರೆ. ತಮ್ಮ ಪಕ್ಷದ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾನ್, ದೇಶದ ಸಮಗ್ರತೆಗೆ ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ಜನರು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ. ಅವರಿಗೆ ಹಿಂದಿ ಬೇಡವೆಂದಾದರೆ, ಆರ್ಥಿಕ ಲಾಭಕ್ಕಾಗಿ ತಮಿಳು ಚಿತ್ರಗಳನ್ನು ಹಿಂದಿಗೆ ಏಕೆ ಡಬ್ ಮಾಡಬೇಕು? ಇದು ನನಗೆ ಅರ್ಥವಾಗುತ್ತಿಲ್ಲ. ಅವರಿಗೆ ಬಾಲಿವುಡ್ನಿಂದ ಹಣ ಬೇಕು. ಆದರೆ ಹಿಂದಿ ಬೇಡ. ಇದು ಯಾವ ರೀತಿಯ ತರ್ಕ?” ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಕಾರ್ಮಿಕರನ್ನು ಸ್ವಾಗತಿಸುವ ತಮಿಳುನಾಡು, ಅವರ ಭಾಷೆಯನ್ನು ತಿರಸ್ಕರಿಸುವುದು “ನ್ಯಾಯಸಮ್ಮತವಲ್ಲ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಹರಿಯಾಣ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ತಮಿಳುನಾಡು ನೆಲೆಯಾಗಿದೆ.
“ತಮಿಳುನಾಡಿನವರಿಗೆ ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್ಗಢದಂತಹ ಹಿಂದಿ ಭಾಷಿಕ ರಾಜ್ಯಗಳಿಂದ ಆದಾಯ ಬೇಕು. ಆದರೆ ಅವರ ಹಿಂದಿ ಬೇಡ ಎಂದು ಹೇಳುತ್ತಾರೆ. ಇದು ಅನ್ಯಾಯವಲ್ಲವೇ? ಅವರು ಬಿಹಾರದ ಕಾರ್ಮಿಕರನ್ನು ಸ್ವಾಗತಿಸುತ್ತಾರೆ. ಅವರ ಭಾಷೆಯನ್ನು ತಿರಸ್ಕರಿಸುತ್ತಾರೆ. ಈ ವಿರೋಧಾಭಾಸ ಏಕೆ? ಈ ಮನಸ್ಥಿತಿ ಬದಲಾಗಬೇಕಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ‘ತ್ರಿಭಾಷಾ ಸೂತ್ರ’ದ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಡಿಎಂಕೆ ಆಡಳಿತದ ತಮಿಳುನಾಡು ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವಂತೆಯೇ ಪವನ್ ಕಲ್ಯಾಣ್ರಿಂದ ಈ ಹೇಳಿಕೆ ಹೊರಬಿದ್ದಿದೆ.
ಎನ್ಇಪಿಯನ್ನು ಜಾರಿ ಮಾಡಲು ರಾಜ್ಯವು ನಿರಾಕರಿಸಿರುವ ಕಾರಣ, ತಮಿಳುನಾಡಿನ ಸಮಗ್ರ ಶಿಕ್ಷಣ ಯೋಜನೆಗೆ ಮೀಸಲಾಗಿದ್ದ 2,152 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ತಡೆಹಿಡಿದಿದೆ ಎನ್ನುವುದು ಡಿಎಂಕೆ ಆರೋಪವಾಗಿದೆ. ಅಲ್ಲಿಂದ ನಂತರ ಈ ವಿವಾದವು ಉಲ್ಬಣಗೊಂಡಿದೆ. ತಮಿಳುನಾಡು ದೀರ್ಘಕಾಲದಿಂದಲೂ ‘ತ್ರಿಭಾಷಾ’ ಸೂತ್ರವನ್ನು ವಿರೋಧಿಸಿಕೊಂಡು ಬಂದಿದ್ದು, ಇದು ರಾಜ್ಯದ ಮೇಲೆ ಹಿಂದಿ ಹೇರುವ ಪ್ರಯತ್ನ ಎಂದು ಆರೋಪಿಸಿದೆ. ಆದರೆ ಈ ನೀತಿಯು ಎಲ್ಲ ಯುವ ಜನರಿಗೂ ಉದ್ಯೋಗ ಸಿಗುವುದನ್ನು ಖಚಿತಪಡಿಸಿಕೊಳ್ಳುವ ಸದ್ದುದ್ದೇಶ ಹೊಂದಿದೆ ಎನ್ನುವುದು ಕೇಂದ್ರ ಸರ್ಕಾರದ ಸಮರ್ಥನೆಯಾಗಿದೆ.