ಕರಾವಳಿ ಮೂಲದ ನಟಿ ಶಿಲ್ಪ ಶೆಟ್ಟಿ ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ ನಟಿ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಆಗಾಗ ನಟಿಸುವ ಶಿಲ್ಪಾ ಶೆಟ್ಟಿ, ತಮ್ಮ ಊರಿನ ಜತೆಗಿನ ಬಾಂಧವ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಕರಾವಳಿಯ ಆಚರಣೆಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಕುಟುಂಬಸಮೇತರಾಗಿ ಆಗಾಗ ದಕ್ಷಿಣ ಕನ್ನಡ ಜಿಲ್ಲೆಗೆ ಶಿಲ್ಪಾ ಶೆಟ್ಟಿ ಭೇಟಿ ನೀಡುತ್ತಾರೆ.
ನಟಿ ಶಿಲ್ಪಾ ಶೆಟ್ಟಿಗೆ ದೇವರು, ದೈವಾರಾಧನೆ ಬಗ್ಗೆ ಅಪಾರವಾದ ನಂಬಿಕೆ ಇದ್ದು, ಆಚರಣೆಗಳನ್ನು ಪಾಲಿಸುತ್ತಾರೆ. ಇನ್ನು ಈ ಹಿಂದೆ ನಟಿ ಶಿಲ್ಪಾ ಶೆಟ್ಟಿ ಅವರು ತಮಗೆ ಹೆಣ್ಣು ಮಗು ಬೇಕು ಎಂದು ಹರಕೆ ಹೊತ್ತಿದ್ದರು. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಹರಕೆ ಹೊತ್ತಿದ್ದರಂತೆ. ಅದೇ ರೀತಿ ದೇವಸ್ಥಾನಕ್ಕೆ ಕುಟುಂಬಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದಾರೆ. ಇದೇ ಕಾರಣಕ್ಕಾಗಿ ಶಿಲ್ಪ ಶೆಟ್ಟಿ ಕಟೀಲು ದೇವಿಯನ್ನು ಆರಾಧನೆ ಮಾಡುತ್ತಾರೆ.
ಶಿಲ್ಪಾ ಶೆಟ್ಟಿ ಅವರು ಮಂಗಳೂರು ಹಿನ್ನೆಲೆ ಹೊಂದಿದವರು. ಅವರಿಗೆ ತುಳು ಭಾಷೆ ಪರ್ಫೆಕ್ಟ್ ಆಗಿ ಮಾತನಾಡಲು ಬರುತ್ತದೆ. ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಸಮಯ ಸಿಕ್ಕಾಗ ದಕ್ಷಿಣ ಕನ್ನಡಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇನ್ನು ಕಳೆದ ತಿಂಗಳು ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ ದರ್ಶನ ಮಾಡಿದ್ದಾರೆ. ಹೊಸ ಮಾರಿಗುಡಿ ಕಂಡು ನಿಬ್ಬೆರಗಾಗಿದ್ದಾರೆ. ಈಗ ಕಾಪುವಿನಲ್ಲಿ ಹತ್ತು ದಿನಗಳ ಕಾಲ ಅದ್ಧೂರಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಹೊಸ ಮಾರಿಗುಡಿ ನೂತನ ದೇವಸ್ಥಾನದ ವೀಕ್ಷಣೆ ಮಾಡಿದ ಶಿಲ್ಪಾ ಶೆಟ್ಟಿ ಖುಷಿಗೊಂಡರು. ಮಾರಿಗುಡಿಯ ನಿರ್ಮಾಣ, ಮರದ ಕೆತ್ತನೆ, ಚಿನ್ನದ ಗದ್ದಿಗೆ ಕಂಡು ನಟಿ ಸಂತಸ ವ್ಯಕ್ತಪಡಿಸಿದರು.