ಆರ್ ಸಿಬಿ ಐಪಿಎಲ್ ಕಪ್ ಗೆದ್ದ ಸಂಭ್ರಮವು ಸೂತಕದ ಛಾಯೆಯಾಗಿ ಬದಲಾಗಿದೆ. ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 11 ಅಮಾಯಕ ಅಭಿಮಾನಿಗಳು ಬಲಿಯಾಗಿದ್ದು, ಸರ್ಕಾರ ಐವರು ಪೊಲೀಸರನ್ನು ಸಸ್ಪೆಂಡ್ ಮಾಡಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಸೇರಿ ಕೇಂದ್ರ ವಿಭಾಗದ ಡಿಸಿಪಿ, ಎಸಿಪಿ, ಎಸ್ಐ ಅವರನ್ನು ಅಮಾನತು ಮಾಡಿದೆ. ಸಸ್ಪೆಂಡ್ ಬೆನ್ನಲ್ಲೇ ಪೊಲೀಸರನ್ನು ಸರ್ಕಾರ ʻಬಲಿ ಕಾ ಬಕ್ರಾʼ ಮಾಡ್ತಾ ಎನ್ನುವ ಚರ್ಚೆ ಶುರುವಾಗಿದೆ.
ನಿನ್ನೆ ಏಕಾಏಕಿ ಸುದ್ದಿಗೋಷ್ಠಿ ಕರೆದ ಸಿಎಂ ಸಿದ್ದರಾಮಯ್ಯ, ಅಮಾನತಿಗೆ ಹಲವು ಕಾರಣ ನೀಡಿದ್ದಾರೆ. ಪೊಲೀಸ್ ಇಲಾಖೆಯ ಮೇಲೆಯೇ ಗೂಬೆ ಕೂರಿಸಿ ಹರಕೆಯ ಕುರಿ ಮಾಡಿದ್ದಾರೆ. ವಿಧಾನ ಸೌಧದ ಮುಂಭಾಗ ಕಾರ್ಯಕ್ರಮ ಮಾಡಿ ಮೈಲೇಜ್ ತೆಗೆದುಕೊಂಡಿದ್ದ ಸರ್ಕಾರ, ಇದೀಗ ತನ್ನ ತಪ್ಪಿಲ್ಲ ಅಂತಾ ರಾಜ್ಯದ ಜನರ ಕಿವಿಗೆ ಹೂವಿಡಲು ಮುಂದಾಗಿದೆ.
ಪೊಲೀಸರ ಸಸ್ಪೆಂಡ್ಗೆ ಸರ್ಕಾರ ಕೊಟ್ಟ ಕಾರಣ ಏನು?
ಜೂನ್ 3ರಂದು ಆರ್ಸಿಬಿ ಸಿಇಓ ವಿಜಯಯಾತ್ರೆಗೆ ಪರ್ಮಿಷನ್ ಕೇಳಿದ್ದರು. ಆದರೆ, ಅನುಮತಿ ನಿರಾಕರಿಸಿ ಪೊಲೀಸ್ ಕಮಿಷನರ್ ಲಿಖಿತ ಉತ್ತರ ನೀಡಿರಲಿಲ್ಲ. ಆರ್ಸಿಬಿ ಮ್ಯಾನೇಜ್ಮೆಂಟ್ ಕೆಎಸ್ಸಿಎ ( Karnataka State Cricket Association) ಯಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳನ್ನು ಆಹ್ವಾನಿಸಿ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿತ್ತು. ಆದರೆ, ಪಾಸ್, ಟಿಕೆಟ್ ವಿತರಣೆ ಸೇರಿದಂತೆ ಯಾವುದೇ ಸಣ್ಣ ಪ್ರಕ್ರಿಯೆಯನ್ನೂ ಮಾಡಿರಲಿಲ್ಲ.
ಹೀಗಾಗಿ ಕಾರ್ಯಕ್ರಮ ಆಯೋಜನೆಯಲ್ಲಿ ಯಡವಟ್ಟು, ಅಧ್ವಾನವೇ ತಾಂಡವವಾಡಿತ್ತು. ಹೀಗಿದ್ದರೂ ಇಂತಹ ದುರಂತದ ಪರಿಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಈ ಎಲ್ಲಾ ಕಾರಣಗಳಿಂದ ಪರಿಸ್ಥಿತಿ ಕೈಮೀರಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿದೆ ಅಂತಾ ಸರ್ಕಾರ ಪೊಲೀಸ್ ಇಲಾಖೆಯನ್ನು ಹೊಣೆ ಮಾಡಿದೆ. ಆದರೆ ಭೀಕರ ಕಾಲ್ತುಳಿತದ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಅಂತಾ ನೆಟ್ಟಿಗರು ಹಿಡಿ ಶಾಪ ಹಾಕುತ್ತಿದ್ದಾರೆ.