ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಈ ವೇಳೆ ಯತ್ನಾಳ್ ಹೈಕಮಾಂಡ್ ಗೆ ಸಲ್ಲಿಸಿದ್ದ ಪತ್ರ ವೈರಲ್ ಆಗಿದೆ.
ಫೆ. 12ರಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಗೆ ನೀಡಿದ್ದ ಉತ್ತರದ ಪತ್ರ ಈಗ ಬಹಿರಂಗವಾಗಿದೆ. ಯತ್ನಾಳ್ ಅವರು 26 ಅಂಶಗಳನ್ನು ಉಲ್ಲೇಖಿಸಿ 9 ಪುಟಗಳ ಉತ್ತರ ನೀಡಿದ್ದರು. ಪತ್ರದಲ್ಲಿ ಯಡಿಯೂರಪ್ಪ (Yediyurappa) ಹಾಗೂ ವಿಜಯೇಂದ್ರ (Vijayendra) ವಿರುದ್ಧ ಆರೋಪ ಮಾಡಿದ್ದಾರೆ.
ನನ್ನ ಮೇಲಿನ ಆರೋಪಗಳು ವ್ಯಕ್ತಿ ಮತ್ತು ಕುಟುಂಬದಿಂದ ಬಂದಿವೆಯೇ ಹೊರತು ಪಕ್ಷದಿಂದಲ್ಲ. ನಾನು ಪಕ್ಷದ ಸಿದ್ಧಾಂತ ಮತ್ತು ಹಿಂದುತ್ವದ ಕಾರಣಕ್ಕೆ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸುತ್ತಿರುವ ಬಂಡಾಯಗಾರರ ಸಭೆಗಳು ಯಡಿಯೂರಪ್ಪನವರ ಮನೆಯಲ್ಲಿ ನಡೆದಿವೆ. ಬಿಜೆಪಿ ಕೇಂದ್ರ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಹಿಂದುತ್ವದ ಸಿದ್ಧಾಂತ ಮತ್ತು ಬಿಜೆಪಿ ತತ್ವಗಳಿಗೆ ಬದ್ಧನಾಗಿದ್ದೇನೆ. ಕರ್ನಾಟಕಕ್ಕೆ ತಟಸ್ಥ ವೀಕ್ಷಕರನ್ನು ನೇಮಿಸಬೇಕೆಂದು ನಾನು ಕೇಂದ್ರ ನಾಯಕತ್ವನ್ನು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದೇನೆ ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದರು.