ಮಂಗಳೂರು: ಕರಾವಳಿಯಲ್ಲಿ ಮತ್ತೆ ರಕ್ತಪಾತವಾಗಿದೆ. ಪ್ರತೀಕಾರದ ಹತ್ಯೆ ನಡೆದಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಪ್ರತೀಕಾರಕ್ಕಾಗಿ ಹತ್ಯೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಹೇಳಿದ್ದಾರೆ.
ಸುಪಾರಿ ಹಂತಕರು 5 ಲಕ್ಷಕ್ಕಾಗಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತನನ್ನು (Hindu Worker) ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮೇ 1 ರಂದು ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾದ 7 ಜನ ಹಾಗೂ ಸುಪಾರಿ ಕೊಟ್ಟ ಓರ್ವನನ್ನು ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ನಿಷೇಧಿತ ಉಗ್ರ ಸಂಘಟನೆ ಪಿಎಫ್ಐನ ಕಾರ್ಯಕರ್ತರೇ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು ಪ್ರಕರಣವನ್ನು ಎನ್ಐಎ ತನಿಖೆ ನಡೆಸಿತ್ತು. 2022ರ ಮೇ 28ರ ರಾತ್ರಿ ಸುರತ್ಕಲ್ ಮಾರ್ಕೆಟ್ ಬಳಿ ಫಾಝಿಲ್ ನನ್ನು ಬರ್ಬರವಾಗಿ ಕತ್ತರಿಸಿ ಹತ್ಯೆ ನಡೆಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಈಗ ಹತನಾಗಿದ್ದಾನೆ.
ಫಾಝಿಲ್ ಹತ್ಯೆಗೆ ರಿವೇಂಜ್ ಹತ್ಯೆ ಮಾಡಬೇಕೆಂದು ಪಣತೊಟ್ಟ ಫಾಝಿಲ್ನ ತಮ್ಮ ಆದಿಲ್ ಸುಪಾರಿ ಕೊಟ್ಟು ತನ್ನ ಅಣ್ಣನನ್ನು ಕೊಂದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದ. ಹೀಗಾಗಿ ನಟೋರಿಯಸ್ ಸಫ್ವಾನ್ಗೆ 5 ಲಕ್ಷದ ಸುಫಾರಿ ನೀಡಿ ಅದರಲ್ಲಿ ಮೂರು ಲಕ್ಷ ರೂಪಾಯಿಯನ್ನ ಅಡ್ವಾನ್ಸಾಗಿ ನೀಡಿದ್ದ. ಸಫ್ವಾನ್ ತನ್ನ ತಂಡದೊಂದಿಗೆ ಮೇ 1 ರ ರಾತ್ರಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ್ದಾನೆ ಎಂಬುವುದಾಗಿ ತಿಳಿದು ಬಂದಿದೆ. ಹಿಂದೂ ಹತ್ಯೆಯಾದ ನಂತರ ಮುಸ್ಲಿಂ, ಮುಸ್ಲಿಂ ಹತ್ಯೆಯ ನಂತರ ಹಿಂದೂ ಹತ್ಯೆಯಾಗಿದೆ.ಇದು ನಿಲ್ಲುವುದು ಯಾವಾಗ? ಎಂದು ಜನ ಪ್ರಶ್ನಿಸುತ್ತಿದ್ದಾರೆ