ಬೆಂಗಳೂರು : ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಸತತ 28 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ವಿಷಯವಾಗಿ ಶಾಸಕರು ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಷಡ್ಯಂತ್ರ. ಇಡಿಯವರು ಬರುವುದು ಒಂದಕ್ಕೆ. ಚೆಕ್ ಮಾಡುವುದು ಮತ್ತೊಂದಕ್ಕೆ ನಾನು ವ್ಯವಸಾಯ ಮಾಡುವವನು ನನ್ನ ಮೇಲೆ ಏನಿರುತ್ತೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ನನ್ನ ಮೇಲೆ ಏನೇನು ಕೇಸ್ ಹಾಕಬೇಕು ಹೇಗೆ ಕಿರುಕುಳ ನೀಡಬೇಕೋ? ಹಾಗೆ ನೀಡಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆ ಹೋಗೋಕೆ ಆಗಿಲ್ಲ. ಐಶ್ವರ್ಯ ಕೊಲ್ಲಾಪುರಕ್ಕೆ ಹೋಗಲು ಬಂದಿದ್ದ ವೇಳೆ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದರು. ಅದಕ್ಕೂ ನನಗೂ ಸಂಬಂಧ ಇಲ್ಲ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯ ಗೌಡ ನಡುವೆ ಏನೋ ಸಮಸ್ಯೆ ಇತ್ತು ಆ ವಿಚಾರಕ್ಕೆ ಕರೆದು ಮಾತನಾಡಿಸಿದ್ದೆ ಅಷ್ಟೇ ಎಂದಿದ್ದಾರೆ.
ಇಡಿಯವರಿಗೆ ಎಷ್ಟೇ ಹುಡುಕಾಡಿದರೂ ಏನು ಸಿಕ್ಕಿಲ್ಲ. ಇಡಿಯವರ ನಡುವಳಿಕೆಯಿಂದ ತುಂಬಾ ನೋವಾಗಿದೆ. ಯಾವಾಗಲೂ ನಾನೇ ಯಾಕೆ ಟಾರ್ಗೆಟ್ ಅಂತಾ ಗೊತ್ತಿಲ್ಲ. ಅವರ ಕಾಲಿಗೆ ಬಿದ್ದು ಅವರ ಜೊತೆಗೆ ಹೋಗಬೇಕು. ಆಗ ಏನಾದರೂ ನನ್ನ ಬಿಡ್ತಾರಾ? ಎಂಬುವುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.