ಬೆಂಗಳೂರು: ಮುಡಾ ವಿಚಾರದಲ್ಲಿ (MUDA Case) ಸಿಎಂ ಒತ್ತಡಕ್ಕೆ ಮಣಿದು ಲೋಕಾಯುಕ್ತ (Lokayukta) ಕ್ಲೀನ್ ಚಿಟ್ ನೀಡಿದ್ದರೆ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವರು, ಲೋಕಾಯುಕ್ತ ತನಿಖಾ ಸಂಸ್ಥೆ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದೇ ಆದರೆ, ಲೋಕಾಯುಕ್ತ ತನಿಖೆ ಸರಿಯಾಗಿ ಆಗುತ್ತಿಲ್ಲ. ಸಿಎಂ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬಿಜೆಪಿ ಹಲವು ದಿನಗಳಿಂದ ವ್ಯಕ್ತಪಡಿಸಿದ ಅನುಮಾನಗಳು ಸತ್ಯವಾದಂತೆ ಎಂದು ಆರೋಪಿಸಿದ್ದಾರೆ.
ಮೊನ್ನೆ ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ಮುಡಾದಲ್ಲಿ ಎಷ್ಟು ಕೋಟಿ ಹಗರಣ ನಡೆದಿದೆ ಎಂಬುದನ್ನು ಮಾಧ್ಯಮಗಳಿಗೆ ಹೇಳಿದ್ದಾರೆ. ರಾಜ್ಯ ಹೈಕೋರ್ಟ್ ಕೂಡ ಮೈಸೂರಿನ ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಆದರೆ, ಸಿಎಂ ಸೇರಿದಂತೆ ರಾಜ್ಯ ಸರ್ಕಾರ ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸುವ ಪ್ರಯತ್ನ ಮಾಡಿದೆ. ಹೈಕೋರ್ಟ್ ತೀರ್ಪು ಬರುವ ಸಂದರ್ಭದಲ್ಲೇ ಲೋಕಾಯುಕ್ತ ವರದಿ ನೀಡಿದ್ದು ಸತ್ಯವಾದರೆ, ಇದು ಖಂಡಿತ ಸರಿಯಲ್ಲ. ನಾವು ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.